ನೂರು ವರ್ಷಗಳ ಹಿಂದೆ ಒಬ್ಬ ಉದ್ಯಮಿ ಬೆಳಗಿನ ಕಾಫ಼ಿ ಸೇವಿಸುತ್ತ ಅಂದಿನ ದಿನಪತ್ರಿಕೆಯೊಂದನ್ನ ಕೈಗೆತ್ತಿಕೊಂಡು ಓದಲು ಪ್ರಾರಂಭಿಸುತ್ತಾನೆ. ಅದರಲ್ಲಿನ ಒಂದು ಆಶ್ಚರ್ಯಕರ ಮತ್ತು ಭಯಾನಕವಾದ ಸುದ್ಧಿ ಆತನನ್ನ ಬೆಚ್ಚಿಬೀಳಿಸುತ್ತದೆ. ಅದು ತನ್ನದೆ ಸಾವಿನ ಸುದ್ಧಿ, ಅದನ್ನ ಓದಿದ ಆತನಿಗೆ ಒಂದು ಕ್ಷಣ ಆಘಾತ ಧಿಗ್ಬ್ರಮೆಯಾಗುತ್ತದೆ. ಕಾರಣ ತಾನು ಜೀವಂತವಿದ್ದಾಗಲೆ ಸತ್ತಿರುವುದಾಗಿ ಪತ್ರಿಕೆ ತಪ್ಪಾಗಿ ವರದಿ ಮಾಡಿತ್ತು. ಆ ಅಘಾತದಿಂದ ಹೊರಬಂದ ಉದ್ಯಮಿಗೆ ತನ್ನ ಸಾವಿನ ನಂತರ ಜನ ಆತನನ್ನ ಹೇಗೆ ನೆನಪಿಸಿಕೊಳ್ಳುತ್ತಾರೆ ಎಂಬ ಕೂತೂಹಲ ಹುಟ್ಟಿ ವರದಿಯನ್ನ ಪೂರ್ತಿಯಾಗಿ ಓದುತ್ತಾನೆ. ಅದರಲ್ಲಿ “ಡೈನಾಮೈಟ್ ಕಿಂಗ ಇನ್ನಿಲ್ಲ” ಮತ್ತು “ಸಾವಿನ ವ್ಯಾಪಾರಿ ಇನ್ನಿಲ್ಲ” ಎಂಬ ಶಿರ್ಷೀಕೆಗಳಲ್ಲಿ ಪತ್ರಿಕೆ ವರದಿ ಮಾಡಿತ್ತು. ಆ ಉದ್ಯಮಿ ಡೈನಾಮೈಟಗಳನ್ನ ಅವಿಸ್ಕಾರ ಮಾಡಿದ್ದು ನಿಜವೆ ಆದರೆ ತಾನು ಸತ್ತ ಮೇಲೆ ಜನ ತನ್ನನ್ನು ಒಬ್ಬ ಸಾವಿನ ವ್ಯಾಪಾರಿಯಂತೆ ಕಾಣುತ್ತಾರೆ ಎಂದು ತಿಳಿದು ವ್ಯಥೆಗೊಂಡು ಅಂದಿನಿಂದಲೆ ತನ್ನೆಲ್ಲ ಸ್ನೇಹಿತರೊಂದಿಗೆ ಸೇರಿ ಶಾಂತಿಗಾಗಿ ಕೆಲಸ ಮಾಡಲಾರಂಭಿಸಿದ. ಮತ್ತು ತಾನು ಸತ್ತ ಮೇಲೆ ತನ್ನ ಸಂಪತ್ತನ್ನೆಲ್ಲ ಜಗತ್ತಿನಲ್ಲಿ ಶಾಂತಿ ಸ್ಥಾಪನೆಗಾಗಿ, ಮನುಕುಲದ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರಿಗೆ ಬಹುಮಾನದ ರೂಪದಲ್ಲಿ ಹಂಚಬೇಕು ಎಂದು ಬರೆದಿಟ್ಟು ಸಾಯುತ್ತಾನೆ. ಅವನೇ ಅಲ್ಪ್ರೆಡ್ ನೊಬೆಲ್, ಶಾಂತಿ ಸ್ಥಾಪನೆಗಾಗಿ, ಮನುಕುಲದ ಏಳಿಗೆಗಾಗಿ ನೀಡುವ ಪ್ರತಿಷ್ಟಿತ ಪ್ರಶಸ್ತಿಯೇ ನೊಬೆಲ್ ಪಾರಿತೋಷಕ.
ಹೌದು, ಆ ಉದ್ಯಮಿ ಅಲ್ಪ್ರೆಡ್ ಬರ್ನಾರ್ಡ ನೊಬೆಲ್. ೧೮೩೩ ರಲ್ಲಿ ಸ್ವೀಡನ್ ದೇಶದ ಸ್ಟೋಕಾಮ್ ಎಂಬಲ್ಲಿ ಜನಿಸಿದ. ತಂದೆ ಸೈನ್ಯಕ್ಕಾಗಿ ಮದ್ದು ಗುಂಡುಗಳ ಸ್ಪೋಟಕ ವಸ್ತುಗಳನ್ನು ತಯಾರಿಸುವ ವ್ರತ್ತಿಯಿಲ್ಲಿದ್ದ. ಆದ್ದರಿಂದ ಮೊದಲಿನಿಂದಲೂ ಸ್ಪೋಟಕ ವಸ್ತುಗಳಲ್ಲಿ ಅತೀವ ಆಸಕ್ತಿಯುಳ್ಳವನಾಗಿದ್ದ ಅಲ್ಪ್ರೆಡ್ ನೊಬೆಲ್ ಒಬ್ಬ ಕೆಮಿಕಲ್ ಇಂಜಿನೀಯರನಾಗಿ, ಸಂಶೋಧಕನಾಗಿ, ರಸಾಯನ ಶಾಸ್ತ್ರಜ್ಞನಾಗಿ ದೇಶದಲ್ಲೆ ಪ್ರತಿಷ್ಟಿತ ಉದ್ಯಮಿಯೆನಿಸಿಕೊಂಡಿದ್ದ. ವಿಜ್ಞಾನದಲ್ಲಿ ತನ್ನ ಸಂಶೋಧನೆಗಳಿಗಾಗಿ ೩೫೫ ವಿವಿಧ ಪೇಟೆಂಟ್ ಗಳನ್ನ ಹೊಂದಿದ್ದ. ಅದರಲ್ಲೂ ಡೈನಾಮೈಟ ಪ್ರಸಿದ್ದಿಯಾಗಿ ಅವನನ್ನ ಜನರು ಡೈನಾಮೈಟ್ ದೊರೆ ಎನ್ನಲಾರಂಭಿಸಿದರು. ಬೋಫ಼ೊರ್ಸ್ ಹೆಸರು ಆತನ ಒಡೆತನದಲ್ಲಿತ್ತು ನಂತರ ಆ ಹೆಸರಿನಿಂದಲೇ ಯುದ್ಧ ಫಿರಂಗಿಗಳನ್ನ ತಯಾರಿಸಲಾಯಿತು.
ತನ್ನ ಸಂಶೋಧನೆಗಳಿಂದ ತಯಾರಿಸುತ್ತಿದ್ದ ಸ್ಪೋಟಕ ಉತ್ಪನ್ನಗಳು ಹಿಂಸೆಯನ್ನು ಉತ್ತೇಜಿಸುತ್ತಿವೆಯೆಂದು ವಿಚಾರವಂತರಿಂದ, ಅಹಿಂಸಾವಾದಿಗಳಿಂದ ಆಗಾಗ ಟೀಕೆಗೊಳಗಾಗುತ್ತಿದ್ದ. ಆಕಸ್ಮಿಕ ತಪ್ಪಿನಿಂದ ದಿನಪತ್ರಿಕೆಯಲ್ಲಿ ಪ್ರಕಟಿಸಿದ “ಸಾವಿನ ವ್ಯಾಪಾರಿ” ವಾಕ್ಯ ಅಲ್ಪ್ರೆಡ್ ನೊಬೆಲನ ಜೀವನದ ದಿಕ್ಕನ್ನೆ ಬದಲಿಸಿತು. ತಾನು ಸತ್ತನಂತರ ಜನ ತನ್ನನ್ನ “ಸಾವಿನ ವ್ಯಾಪಾರಿ” ಎನ್ನದಿರಲೆಂದು ಅಂದಿನಿಂದಲೆ ತನ್ನ ಪೂರ್ವಾಶ್ರಮವನ್ನು ಕಳಚಿಕೊಳ್ಳಲು ಮನುಕುಲದ ಒಳತಿಗಾಗಿ, ವಿಶ್ವದಲ್ಲಿ ಶಾಂತಿ ಸ್ಥಾಪನೆಗಾಗಿ ಕೆಲಸ ಮಾಡಲಾರಂಭಿಸಿದ. ಸಾವಿನ ನಂತರವೂ ಆ ಕೆಲಸ ಮುಂದುವರೆಯಲೆಂದು ತನ್ನೆಲ್ಲ ಸಂಪತ್ತನ್ನು ನೋಬೆಲ್ಲ್ ಪ್ರೈಜ್ ಇನ್ಸ್ಟಿಟ್ಯುಟಗೆ ಬರೆದಿಟ್ಟು ಲೋಕೋಪಕಾರಿ ಎನಿಸಿಕೊಂಡ. ೧೮೯೬ ರಲ್ಲಿ ಇಹಲೋಕ ತ್ಯಜಿಸಿದ. ಆತನ ಒಟ್ಟಾರೆ ಸಂಪತ್ತನ್ನ ೨೦೧೨ ರಲ್ಲಿ ಸುಮಾರು ರೂ. ೩೫೦೦ ಕೋಟಿಯೆಂದು ಅಂದಾಜಿಸಲಾಗಿತ್ತು. ಸ್ವೇಡಿಶ್ -ನಾರ್ವೆಯನ್ ಸಂಸ್ಥೆ ಆತನ ಇಚ್ಚೆಯಂತೆ ಪ್ರತಿ ವರ್ಷ ಭೌತಶಾಸ್ತ್ರ, ರಸಾಯನ ಶಾಸ್ತ್ರ, ವೈದ್ಯಕೀಯ ಶಾಸ್ತ್ರ, ಸಾಹಿತ್ಯ, ಮತ್ತು ಅರ್ಥಶಾಸ್ತ್ರ ಸೇರಿ ಒಟ್ಟು ೬ ವಿವಿಧ ಕ್ಷೇತ್ರಗಳಿಗೆ ನೊಬೆಲ್ ಪಾರಿತೋಷಕಗಳನ್ನ ನೀಡಲು ನಿರ್ಧರಿಸಿತು. ನೊಬೆಲ್ ಪಾರಿತೋಷಕದೊಂದಿಗೆ ಡಿಪ್ಲೋಮಾ ಪದವಿ ಮತ್ತು ಸುಮಾರು ರೂ. ೮.೫ ಕೋಟಿಯಷ್ಟು ಹಣವನ್ನು ಕೂಡ ನೀಡುತ್ತಾರೆ. ಒಂದು ಪಾರಿತೋಷಕವನ್ನು ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಬ್ಬರು, ಅಥವಾ ಇಬ್ಬರು ಅಥವಾ ಮೂರು ಜನರಿಗೂ ಹಂಚಬಹುದು.
ಅಧಿಕ್ರತವಾಗಿ ನೊಬೆಲ್ ಪ್ರಶಸ್ತಿಗಳನ್ನ ೧೯೦೧ ರಿಂದ ಪ್ರತಿವರ್ಷ ೬ ವಿಭಿನ್ನ ಕ್ಷೇತ್ರಗಳಲ್ಲಿನ ಸಾಧಕರ ಸೇವೆಗಾಗಿ ನೀಡಲು ಪ್ರಾರಂಭಿಸಿದರು. ಈವರೆಗೆ ಬೌತಶಾಸ್ತ್ರ- ೨೧೬, ರಸಾಯನ ಶಾಸ್ತ್ರ- ೧೮೬, ವೈದ್ಯಕೀಯ ಶಾಸ್ತ್ರ- ೨೨೨, ಸಾಹಿತ್ಯ-೧೧೭, ಶಾಂತಿ, ಸೌಹಾರ್ಧತೆ & ವಿಶ್ವ ಭ್ರಾತ್ವತ್ವ-೧೩೫ ಹಾಗೂ ಅರ್ಥಶಾಸ್ತ್ರ-೮೬ ಹೀಗೆ ಒಟ್ಟು ೮೮೪ ಸಾಧಕರನ್ನು (೫೮ ಮಹಿಳೆಯರು, ೮೨೬ ಪುರುಷರು), ೭೮ ಸಂಸ್ಥೆಗಳನ್ನ ಗುರುತಿಸಿ ೬೦೩ ನೊಬೆಲ್ ಪ್ರಶಸ್ತಿಗಳನ್ನ ಹಂಚಲಾಗಿದೆ.
ಫ಼್ರಾನ್ಸ್, ಜರ್ಮನಿ, ನೆದರಲ್ಯಾಂಡ್ ಹಾಗೂ ಸ್ವಿಟ್ಜರಲ್ಯಾಂಡ ನೊಬೆಲ್ ಪ್ರಶಸ್ತಿ ಪಡೆದ ಮೊದಲ ರಾಷ್ಟ್ರಗಳು. ಒಟ್ಟು ೩೯೦ ಪ್ರಶಸ್ತಿ ಪಡೆದ ಅಮೇರಿಕಾ ಅಗ್ರಗಣ್ಯ ರಾಷ್ಟ್ರವಾದರೆ, ೧೩೪ ಪ್ರಶಸ್ತಿ ಪಡೆದ ಯುನೈಟೆಡ್ ಕಿಂಗಡಮ್ ಎರಡನೇಯ ಸ್ಥಾನ ಮತ್ತು ೧೦೯ ಪ್ರಶಸ್ತಿ ಪಡೆದ ಜರ್ಮನಿ ಮೂರನೇಯ ಸ್ಥಾನದಲ್ಲಿದೆ. ೧೯ ರಾಷ್ಟ್ರಗಳು ೧೦ಕ್ಕೂ ಹೆಚ್ಛು ಪ್ರಶಸ್ತಿ ಪಡೆದರೆ ೩೩ ರಾಷ್ಟ್ರಗಳು ೧ ಅಥವಾ ೧ ಕ್ಕೂ ಹೆಚ್ಛು ಈ ಪ್ರಶಸ್ತಿ ಪಡೆದಿವೆ.
ಇಲ್ಲಿಯವರೆಗೆ ಒಟ್ಟು ೧೨ ನೊಬೆಲ್ ಪ್ರಶಸ್ತಿಗಳನ್ನ ಪಡೆದ ಭಾರತ ೧೮ನೇ ಸ್ಥಾನದಲ್ಲಿದೆ. ಅದರಲ್ಲಿ ೬ ಜನ ವಿದೇಶಿ ಮೂಲದ ಭಾರತೀಯರು. ೧೯೦೨ ರಲ್ಲಿ ರೊನಾಲ್ಡ್ ರೋಸ್ ಅವರಿಗೆ ವೈದ್ಯಕೀಯ ಕ್ಷೇತ್ರದ ಸೇವೆಗಾಗಿ ಭಾರತಕ್ಕೆ ಮೊದಲ ನೊಬೆಲ್ ಪ್ರಶಸ್ತಿ ದೊರಕಿತು. ೧೯೧೩ ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ರವಿಂದ್ರನಾಥ ಟ್ಯಾಗೋರ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮೂಲಭಾರತೀಯನಾದರೆ ೧೯೭೯ ರಲ್ಲಿ ಶಾಂತಿಗಾಗಿ ಭಾರತಕ್ಕೆ ನೊಬೆಲ್ ಪ್ರಶಸ್ತಿ ದೊರೆಕಿಸಿದ ಮದರ ಥೇರೆಸಾ ಮೊದಲ ಮಹಿಳೆಯಾದಳು.
ಈರೋಪನಲ್ಲಿ ಜನ ೧೫ನೇ ಶತಮಾನದ ವೇಳೆಗೆ ಪ್ರಚಲಿತವಿದ್ದ ಪ್ಲೇಟೊ, ಅರಿಷ್ಟಾಟಲ್, ಟಾಲೆಮಿ ಅಂತಹ ಗ್ರೀಕ್ ತತ್ವಜ್ಞಾನಿಗಳ ಸಿದ್ದಾಂತಗಳನ್ನ ಪ್ರಶ್ನಿಸಲು ಆರಂಭಿಸಿದರು. ಟಾಲೆಮಿಯ ನಕ್ಷೆ ಹಿಡಿದು ಕೋಲಂಬಸ್ ಏಸಿಯಾ ಖಂಡವನ್ನು ಹುಡುಕಲು ಹೋದವನಿಗೆ ಸಿಕ್ಕಿದ್ದು ಉತ್ತರ ಅಮೇರಿಕಾ, ಈ ಘಟನೆ ಸೌರಮಂಡಲದ ಕೇಂದ್ರ ಭೂಮಿಯೋ ಸೂರ್ಯನೋ ಎಂಬ ಜಿಜ್ಞಾಸೆ ಹುಟ್ಟಿಸಿ ಹೊಸ ಹೊಸ ಅವಿಷ್ಕಾರಗಳಿಗೆ ಎಡೆಮಾಡಿತು. ಖಗೋಳ ಶಾಸ್ತ್ರದ ಅಧ್ಯಯನವನ್ನು ಬಲಪಡಿಸಿ ವೈಜ್ಞಾನಿಕ, ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿತು. ಹಿಂದಿನ ಸಂಪ್ರದಾಯಗಳು, ಸಿದ್ದಾಂತಗಳು, ನಂಬಿಕೆಗಳು, ಒಂದೊಂದಾಗಿ ನೆಲಕಚ್ಚಿದವು. ಪ್ರಚಲಿತದವಿದ್ದ ಸಿದ್ಧಾಂತದ ಭಾಷೆಗಿಂತ ಜನ ನಿಸರ್ಗದ ಭಾಷೆ ಕಲಿಯಲು ಅಣಿಯಾದರು. ಅದರ ಫಲವೇ ಕೋಪರನಿಕಸ್ ಆಧುನಿಕ ವಿಜ್ಞಾನದ ಹರಿಕಾರನಾದ, ನಂತರ ಗೆಲಿಲಿಯೋ ಗೆಲಿಲಿಯೋ, ಲಿಯೋನಾರ್ಡೊ-ಡಾ-ವಿಂಚಿ, ಜುಹನ್ನಾಸ್ ಕೆಪ್ಲರ್, ಸರ ಐಸಾಕ್ ನ್ಯೂಟನ್, ಹ್ಯುಜನ್ ಕ್ರಿಸ್ತಿಯಾನ್, ಥಾಮಸ್ ಅಲ್ವಾ ಎಡಿಸನ್, ಅಲೆಕ್ಸಾಂಡರ್ ಗ್ರಹಾಂ ಬೆಲ್ಲ್, ಬೆಂಜಮಿನ್ ಫ಼್ರ್ಯಾಂಕ್ಲಿನ್, ನಿಕೋಲಾ ಟೆಸ್ಲಾರಂತಹ ಮಹಾನ್ ವಿಜ್ಞಾನಿಗಳು ಹುಟ್ಟಿಕೊಂಡರು. ಇವರ ಸಂಶೋಧನೆಗಳ ಫಲವಾಗಿ ೧೭-೧೮ ನೆ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿ ನಡೆದು ಅಧುನಿಕ ಜಗತ್ತಿಗೆ ಹೊಸ ಬೆಳಕನ್ನು ಚೆಲ್ಲಿತು.
೨೦ನೇ ಶತಮಾನದ ನೊಬೆಲ್ ಪುರಸ್ಕ್ರುತ ಕೆಲವು ಅವಿಸ್ಕಾರಗಳನ್ನು ನೋಡುವುದಾದರೆ –
ಸರ್ ರೋನಾಲ್ಡ್ ರೊಸ್ (ಬ್ರಿಟೀಶ್ ಭಾರತೀಯ) ಅವರ ಮಲೇರಿಯಾ ಅನ್ವೇಷಣೆ,
ಅಲ್ಬರ್ಟ್ ಐನಸ್ಟೀನನ ಫೊಟೊಎಲೆಕ್ಟಿಕ್ ಎಫ಼ೆಕ್ಟ್ ಮತ್ತು ಥಿಯರಿ ಆಪ್ ರಿಲೇಟಿವಿಟಿ,
ಮೇರಿ ಕ್ಯೂರಿ, ಪಿಯರೆ ಕ್ಯೂರಿ, ಹೆನ್ರಿ ಬೆಕರೆಲ್ ಅವರ ರೆಡಿಯೋ ಆಕ್ಟಿವಿಟಿ,
ಸರ್ ಅಲೆಕ್ಸಾಂಡರ್ ಫ಼್ಲೆಮಿಂಗೊ, ಎರ್ನ್ಸ್ಟ್ ಚೈನ್ & ಸರ್ ಹಾವರ್ಡ್ ಫ಼್ಲೋರೆ ಅವರ ಪೆನ್ಸಿಲಿನ್ ಅಂಟಿಬಯಾಟಿಕ್,
ಹೆರ್ಮನ್ನ್ ಮುಲ್ಲರ್ ಅವರ ಕ್ಷ-ಕಿರಣಗಳ ರೇಡಿಯೆಶನ್,
ಫ಼್ರಾನ್ಸಿಸ್ ಕ್ರಿಕ್, ಜೇಮ್ಸ್ ವ್ಯಾಟ್ಸನ್ ಮತ್ತು ಮೌರಿಶ್ ವಿಲ್ಕಿನ್ಸ್ ರವರ ಡಿ.ಏನ.ಏ. ಸೂತ್ರ,
ವಾರ್ನರ್ ಹೆಸೆನ್ಬರ್ಗ್ ಅವರ ಕ್ವಾಂಟಮ್ ಮೆಕ್ಯಾನಿಕ್ಸ್,
ಬ್ರಾಡ್ಫೋರ್ಡ್ ಶಾಕ್ಲೆ ಮತ್ತು ಜಾನ್ ಬರ್ಡೀನ್ ಅವರ ಸೆಮಿಕಂಡಕ್ಟರ್ ಮತ್ತು ಟ್ರಾನ್ಸಿಸ್ಟರ್.
ಇವು ೨೦ನೇ ಶತಮಾನದ ಅತ್ಯಂತ ಮಹತ್ವದ ಅವಿಷ್ಕಾರಗಳು. ಮಲೇರಿಯಾಕ್ಕೆ ಔಷದಿ ಕಂಡುಹಿಡಿಯದಿದ್ದರೆ, ಪೆನ್ಸಿಲಿನ್ ರೋಗ ನಿರೋಧಕ ಇಲ್ಲದಿದ್ದರೆ ಎಷ್ಟೊ ಅಸಂಖ್ಯಾತ ಸಾವುಗಳಾಗುತ್ತಿದ್ದವು, ಡಿ.ಏನ್.ಏ ಸೂತ್ರ ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೊಂದು ಕ್ರಾಂತಿಯನ್ನೆ ಸ್ರಷ್ಟಿಸಿದೆ. ಸೆಮಿಕಂಡಕ್ಟರ್ ಇಲ್ಲದಿದ್ದರೆ ಎಲೆಕ್ಟ್ರಾನಿಕ ಕೈಗಾರಿಕೆನೆ ಇರುತ್ತಿರಲಿಲ್ಲ, ಟ್ರಾನ್ಸಿಸ್ಟರ್ ಗಳಿಲ್ಲದಿದ್ದರೆ ಈ ಪೋಸ್ಟನ್ನು ನೀವು ಓದಲು ಸಾದ್ಯವಿರುತ್ತಿರಲಿಲ್ಲ. ಇಂತಹ ಅವಿಷ್ಕಾರಗಳೊಂದಿಗೆ ಮಾನವನಿಗೆ ನೆಲಬಿಟ್ಟು ಮೇಲೆ ಗಾಳಿಯಲ್ಲಿ ಹಕ್ಕಿಯಂತೆ ಹಾರಾಡಲು ರೆಕ್ಕೆಗಳು ಬಂದವು. ನಿಸರ್ಗದಲ್ಲಿ ಮಾನವ ಕಾಣಿಸಿಕೊಂಡ 70 ಲಕ್ಷ ವರ್ಷಗಳ ಮೇಲೆ ಮೊಟ್ಟ ಮೊದಲ ಬಾರಿ ೧೯೬೯ ರಲ್ಲಿ ಅಂತರಿಕ್ಷಕ್ಕೆ ಜಿಗಿದು ತನ್ನ ಬರಿಗಣ್ಣಿನಿಂದ ಗೋಳಾಕಾರದ ನೀಲಿ ಪ್ರಥ್ವಿಯನ್ನ ನೋಡುವಂತಾಯಿತು, ಇದೆಲ್ಲ ಸಾಧ್ಯವಾಗಿದ್ದು ವಿಜ್ಞಾನ ಮತ್ತು ವೈಚಾರಿಕ ಕ್ರಾಂತಿಯಿಂದ.
ಒಂದು ಸ್ವಾರಸ್ಯಕರ ವಿಷಯವೆಂದರೆ ಮೇರಿಕ್ಯೂರಿ ಅವರ ಕುಟುಂಬ. ಅವರ ಕುಟುಂಬವನ್ನು ನೊಬೆಲ್ ಕುಟುಂಬವೆಂದು ಕರೆಯುವುದುಂಟು ಕಾರಣ ತಾನು, ತನ್ನ ಗಂಡ, ತನ್ನಿಬ್ಬರ ಹೆಣ್ಣು ಮಕ್ಕಳು ಮತ್ತು ಅವರ ಗಂಡಂದಿರೆಲ್ಲರೂ ನೊಬೆಲ್ ಪ್ರಶಸ್ತಿ ಪಡೆದವರು. ಅಷ್ಟೇ ಅಲ್ಲ ಮೇರಿ ಕ್ಯೂರಿಗೆ ಬೇರೆ ಬೇರೆ ಕ್ಷೇತ್ರದಲ್ಲಿ ಎರಡು ನೊಬೆಲ್ ಪ್ರಶಸ್ತಿ ದೊರಕಿವೆ. ಆಧುನಿಕ ವಿಜ್ಞಾನಕ್ಕೆ ಇಂತಹ ಅಭೂತಪೂರ್ವ ಕೊಡುಗೆ ಬೇರೆಲ್ಲೂ ಕಾಣ ಸಿಗುವುದಿಲ್ಲ.
ಒಟ್ಟಿನಲ್ಲಿ ಮನುಕುಲದ ಒಳಿತಿಗಾಗಿ, ಜಗತ್ತಿನಲ್ಲಿ ಶಾಂತಿ ಸ್ಥಾಪಿಸುವುದಕ್ಕಾಗಿ ಅಲ್ಪ್ರೆಡ್ ನೊಬೆಲ್ ಮಹತ್ವದ ಕೊಡುಗೆ ನೀಡಿ ತನ್ನದೆ ಪರಂಪರೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿ ಕೊನೆಗೂ “ಶಾಂತಿಧೂತ” ಎನಿಸಿಕೊಂಡ. ಇದಕ್ಕೂ ಮೊದಲೂ ಇದೇ ಸಂದೇಶವನ್ನು ಬುದ್ಧ ಬೋಧಿಸಿದ್ದ, ಬಸವಣ್ಣ ದಯವಿಲ್ಲದ ಧರ್ಮ ಅದಾವುದಯ್ಯ ಎಂದು ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದ್ದ ಆದರೆ ೨೦ನೆ ಶತಮಾನದಲ್ಲಿಯೂ ಹಿಟ್ಲರ್ ನಂತಹ ಕ್ರೂರ ವ್ಯಕ್ತಿಗಳು ಮನುಕುಲಕ್ಕೆ ಅಪವಾದವಾಗಿ ರಕ್ತ ಚೆಲ್ಲಾಡಿದ. ಇದು ನಿಶ್ಚಿತವಾಗಿ ಬುದ್ಧ ಬಸವರ ಸೋಲಾಗಿರಲಿಲ್ಲ ಬದಲಾಗಿ ಅವರ ಸಂದೇಶವನ್ನು ಜಾಗತಿಕವಾಗಿ ಆಚರಣೆಗೆ ತರುವಲ್ಲಿ ಮನುಷ್ಯ ವಿಫಲನಾದ ಎಂದರೆ ಹೆಚ್ಚು ಸೂಕ್ತ. ಆದರೂ ನಿರಾಶರಾಗಬೇಕಿಲ್ಲ, ಬುದ್ಧ ಬಸವರು ನೊಬೆಲ್ ನಂತಹ ಚೇತನಗಳಲ್ಲಿ ಮತ್ತೆ ಮತ್ತೆ ಹುಟ್ಟಿ ಬರುತ್ತಲೇ ಇದ್ದಾರೆ ಕಾರಣ ಹಿಟ್ಲರ್ ಹುಟ್ಟಿದ ಕಾಲಘಟ್ಟದಲ್ಲೇ ಮಹಾತ್ಮ ಗಾಂಧಿ, ಮದರ ಥೇರೆಸಾಗಳು ಕೂಡ ಹುಟ್ಟಿದ್ದಾರೆ.
ಇಂದಿನ ಜಗತ್ತಿನ ವ್ಯವಸ್ಥೆ ಹೇಗಿದೆಯೆಂದರೆ ಪ್ರತಿಯೊಬ್ಬ ಮನುಷ್ಯನಿಗೆ ದಿನಕ್ಕೆ ಎರಡು ಹೊತ್ತಿನ ಅಹಾರದ ಭದ್ರತೆ ಇಲ್ಲ ಆದರೆ ಪ್ರತಿಯೊಬ್ಬ ಮನುಷ್ಯನನ್ನ ಕನಿಷ್ಠ ೧೦- ೧೫ ಬಾರಿ ಕೊಲ್ಲುವಷ್ಟು ಶಸ್ತ್ರಾಸ್ತ್ರ, ಮದ್ದುಗುಂಡುಗಳು, ಅಣ್ವಸ್ತ್ರ ಸಿಡಿತಲೆಗಳನ್ನ ತಯಾರಿಸಿ ಇಟ್ಟಿದ್ದಾನೆ. ಮನುಕುಲದ ಒಳಿತಿಗಾಗಿ ಬಂದ ವಿಜ್ಞಾನದ ಪ್ರಗತಿ ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಸಿಗಲಾರದಂತೆ ನೋಡಿಕೊಳ್ಳುವ ಸಾಮಾಜಿಕ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ. ಆದ್ದರಿಂದ ಜಗತ್ತಿಗೆ ಬೇಕಿರುವುದು ಈಗ ಬುದ್ಧ ಬಸವನ ಮಾನವೀಯ ಸಂದೇಶವೇ ಹೊರತು ತನ್ನನ್ನೆ ಸರ್ವನಾಶ ಮಾಡಬಲ್ಲ ಮದ್ದುಗುಂಡುಗಳಲ್ಲ, ಇದನ್ನ ಮನಗಂಡ ಅಲ್ಪ್ರೆಡ್ ನೊಬೆಲ್ ಜಗತ್ತಿಗೆ ತನ್ನ ಪರಿವರ್ತನೆಯಿಂದ ಅದ್ಭುತವಾದ ಸಂದೇಶವನ್ನ ಕೊಟ್ಟು ಹೋದ.
ಅಲ್ಪ್ರೆಡ್ ನೊಬೆಲ್ ದೊಡ್ಡ ದೊಡ್ಡ ಕಲ್ಲುಬಂಡೆಗಳನ್ನ ಡೈನಾಮೈಟನಿಂದ ಸಿಡಿಸಿ ಗಣಿ ಕೈಗಾರಿಕೆಗಳ ಅಭಿವ್ರದ್ಧಿಗೆ ಮಾತ್ರ ಸೆಣಿಸಲಿಲ್ಲ ಬದಲಾಗಿ ತನ್ನ ಮನ ಪರಿವರ್ತನೆಯಿಂದ ನಮ್ಮ ಹ್ರದಯಗಳಲ್ಲಿದ್ದ ಮಾನವೀಯ ಬೀಜಗಳನ್ನು ಕೂಡ ಮೊಳಕೆಯೊಡೆಸಿದ್ದಾನೆ. ಹಾಗಾಗಿ ಅಲ್ಪ್ರೆಡ್ ಬರ್ನಾರ್ಡ ನೊಬೆಲ್ ಒಬ್ಬ ಮಹಾನ ಚೇತನ, ಮನುಕುಲದ ದ್ರುವತಾರೆ, ಅವನಿಗೊಂದು ಶರಣು.
✒ಪ್ರಕಾಶ ಉಳ್ಳೇಗಡ್ಡಿ
ಮಸ್ಕತ್ತ-ಒಮಾನ್
ಶರಣು ಶರಣಾರ್ಥಿಗಳು.
🙏🌹🥀🥇🏆🌹🥀🙏