ಲಿಂಗಾಯತ ಕ್ರಾಂತಿ: ಎಂ.ಎಂ.ಕಲ್ಬುರ್ಗೀ ಸರ್ ಬರೆದಂತ ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ ಎನ್ನುವ ಶೀರ್ಷಿಕೆಯನ್ನು ಇಲ್ಲಿ ಬಳಸುತ್ತಿರುವೆ.ಕಲ್ಬುರ್ಗಿ ಸರ್ ಬರೆದಂತೆ “ಧಾರ್ಮಿಕ ಆಯಾಮ ಕಾರಣವಾಗಿ ಬಸವಣ್ಣ ಬುದ್ಧನಿಗೆ ಹತ್ತಿರವೆನಿಸುತ್ತಾನೆ. ಕಾಲದ್ರಷ್ಠಿಯಿಂದ ಇವರಿಬ್ಬರಗೂ ಒಂದೂವರೆ ಸಾವಿರ ವರ್ಷಗಳ ಅಂತರ . ಪ್ರಾದೇಶಿಕವಾಗಿ ಒಬ್ಬನದು ಉತ್ತರ ಭಾರತ ಇನ್ನೊಬ್ಬನದು ದಕ್ಷಿಣ ಭಾರತ.ಹೀಗಾಗಿ ಕಾಲ -ದೇಶ ದ್ರಷ್ಠಿಯಿಂದ ಒಬ್ಬರಿಗೊಬ್ಬರು ಸಂಬಂಧವಿಲ್ಲ , ಆದರೆ ಇವರ ನಿಲುವುಗಳಲ್ಲಿ ಬಹುಪಾಲು ಹೋಲಿಕೆ ಕೇವಲ ಆಕಸ್ಮಿಕವೆಂದೂ ಅಲ್ಲ .ಇವುಗಳಲ್ಲಿ ಆಂತರ್ಯದಲ್ಲಿ ಚಾರಿತ್ರಿಕ ಸಂಬಂಧವಿದೆ.ತಾತ್ವಿಕ ಬೆಳವಣಿಗೆಯಿದೆ ಎಂದು ಅನಿಸುತ್ತದೆ.ಅಂದರೆ ತಾತ್ವಿಕವಾಗಿ ಬದಲಾಗುತ್ತಾ ಬಂದ ಬೌದ್ಧ ಧರ್ಮವೇ ಶರಣಧರ್ಮ,ಬದಲಾಗಿ ನಿಂತ ಬುದ್ಧನೇ ಬಸವಣ್ಣನೆನಿಸುತ್ತದೆ.”
ಹೌದು ಕಲ್ಬುರ್ಗಿ ಸರ್ ಅವರ ಭಾವ ನಿಜಕ್ಕೂ ಸತ್ಯ ಎನಿಸುತ್ತದೆ. ಇಲ್ಲಿಯವರೆಗೂ ಶರಣ ಧರ್ಮವನ್ನು ಓದುತ್ತಿದ್ದ ನನಗೆ , ಬೌದ್ಧ ಧರ್ಮ ನನ್ನು ಅರಿಯಬೇಕು ಎಂದು ಓದಲು ಆರಂಭಿಸಿದಾಗ ಕಲ್ಬುರ್ಗಿ ಸರ್ ಅವರ ಹೇಳಿಕೆ ನಿಜ ಅನಿಸಿತು. ಬಸವಣ್ಣನ ಅಂಗವು ಲಿಂಗವಾಗುವ ಪರಿ ,ಬುದ್ದನ ಭೋಧಿಸತ್ತನಿಂದ ಬುದ್ಧನಾಗುವ ಪರಿಯಲ್ಲಿ ಭಿನ್ನತೆಗಳು ಇಲ್ಲ.
ಬುದ್ದನು ಭೋಧಿಸತ್ತನಿಂದ ಬುದ್ಧನಾಗಲು ಹತ್ತು ಸ್ಥಲಗಳಲ್ಲಿ ಸಾಧನೆ ಮಾರ್ಗ ಹೇಳಿದರೆ ,ಬಸವಣ್ಣನು ಭಕ್ತನಿಂದ ಶರಣನಾಗಿ ಐಕ್ಯನಾಗಲು ಷಟ್ ಸ್ಥಲ ಸಾಧನೆ ಮಾರ್ಗವನ್ನು ಹೇಳಿದ್ದಾನೆ. ಬುದ್ದನು ಹೇಳಿದ ಭೋಧಿಸತ್ತ ಎಂದರೆ ಯಾರು ? ಬುದ್ದ(ಅರಿವು)ನಾಗಲು ಬಯಸುವವನು ಭೋಧಿಸತ್ತ . ಇದನ್ನು ಬಸವಣ್ಣ ಭಕ್ತಸ್ಥಲದಲ್ಲಿ ಭಕ್ತ ಎಂದು ಹೇಳಿದ್ದಾನೆ.
ಬೌದ್ದ ನಮ್ಮೂರಲ್ಲಿ ಹೇಳಿದ ಹತ್ತು ಜನ್ಮ( ಸ್ಥಲಗಳು)ಗಳಲ್ಲಿ
ಮೊದಲನೇ ಜನ್ಮ(ಸ್ಥಲ):
ಅವನು (ಭೋಧಿಸತ್ತನು) ತನ್ನ ಮೊದಲ ಜನ್ಮದಲ್ಲಿ ಸಂತೋಷವನ್ನು ಹೊಂದಿರಬೇಕು.ಅಕ್ಕಸಾಲಿಗನು ಬೆಳ್ಳಿಯಲ್ಲಿರುವ ಕಲ್ಮಶಗಳನ್ನು ಹೊರತೆಗೆಯುವಂತೆ ಭೋಧಿಸತ್ತನಾಗಬಯಸುವ ವ್ಯಕ್ತಿ ಯು ತನ್ನಲ್ಲಿರುವ ಕೆಟ್ಟ ಗುಣಗಳನ್ನು ತೆಗೆದು ,ಅವನು ಪ್ರಸನ್ನಗೊಳಿಸಿ ಈ ಜಗತ್ತಿನ ಎಲ್ಲರಿಗೂ ಒಳ್ಳೆಯದನ್ನು ಬಯಸುವಂತೆ ಉದ್ದೀಪಿಸುತ್ತದೆ .
ಇದನ್ನು ಶರಣಧರ್ಮದಲ್ಲಿ :
ಭಕ್ತ ಎಂದು.ಭಕ್ತನ ಗುಣ ಲಕ್ಷಣಗಳು,
“ಭಕ್ತನು ಶಾಂತನಾಗಿರಬೇಕು .ತನ್ನ ಕುರಿತು ಬಂದ ಠಾವಿನಲ್ಲಿ .ಸತ್ಯವಾಗಿ ನುಡಿಯಬೇಕು .ಗುರುಲಿಂಗ ಜಂಗಮ ದಂಡೆಯಲ್ಲಿ ನಿಂದೆಯಿಲ್ಲದಿರಬೇಕು.ಭೂತ ಹಿತವಹ ವಚನ ನುಡಿಯಬೇಕು.ಸಕಲ ಪ್ರಾಣಿಗಳ ತನ್ನಂತೆ ಕಾಣಬೇಕು.ತನು ಮನ ಧನವ ಜಂಗಮಕ್ಕೆ ಸವೆಸಬೇಕು.ಅಪಾತ್ರದಾನವ ಮಾಡಲಾಗದು .ಸಕಲೇಂದ್ರಿಯಂಗಳ ತನ್ನ ವಶವ ಮಾಡಬೇಕು.ಇದೇ ಮೊದಲಲ್ಲಿ ಬೇಳೆ ಶೌಚನೋಡಾ ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ ಇದೇ ಸಾಧನೆ ನಮ್ಮ ಕೂಡಲಚೆನ್ನಸಂಗಮದೇವಾ”
ಬೌದ್ದ ಧರ್ಮದ ಎರಡನೆ ಜನ್ಮ(ಸ್ಥಲ):
ಅವನು ಎರಡನೇ ಜನ್ಮದಲ್ಲಿ ಪರಿಶುದ್ಧತೆಯನ್ನು ಹೊಂದುತ್ತಾನೆ.ಲೌಕಿಕ ಜಗತ್ತಿನ ಇಂದ್ರಿಯಾಸಕ್ತಿಯ ಭಾವಗಳನ್ನು ಅವನಲ್ಲಿ ಬತ್ತಿ ಹೋಗುತ್ತದೆ .ಈ ಹಂತದಲ್ಲಿ ಭೋದಿಸತ್ತನು ದಯಾಮಯಿಯಾಗಿರುತ್ತಾನೆ.ಅವನು ಯಾರೊಬ್ಬರ ಅವಗುಣಗಳನ್ನು ತಿರಸ್ಕರಿಸಲಾಗಿದೆ.ಹಾಗೆಯೇ ಸದ್ಗುಣಗಳನ್ನು ಶ್ಲಾಘಿಸಲಾರ.
ಶರಣಧರ್ಮ : ಮಾಹೇಶ್ವರ ಸ್ಥಲ
” ಪರಧನ ಪರಸತಿ ಪರವಾರ್ತೆಯ ತೊರೆಯದನ್ನಕ್ಕ ಎಂತೂ ಮಾಹೇಶ್ವರನಪ್ಪನಯಯ್ಯ. ಲಿಂಗಪೂಜೆಯಲ್ಲಿ ಲೀಯವಾಗಿ ಅಂಗಗುಣ ವಿರೋಧಿಯಾಗದನ್ನಕ್ಕ ಎಂತೂ ಮಾಹೇಶ್ವರನಪ್ಪನಯ್ಯಾ.ಗುರು ಪ್ರಸಾದದಲ್ಲಿ ನಿಹಿತಾವಧಾನಿಯಾಗದನಕ್ಕರ ಎಂತೂ ಮಾಹೇಶ್ವರನಪ್ಪನಯ್ಯಾ.ಕೂಡಲಚನ್ನಸಂಗಯ್ಯನಲ್ಲಿ ಮಾಹೇಶ್ವರ ನೆನಿಸಿಕೊಂಬುವುದು ಸಾಮಾನ್ಯವೇ ಅಯ್ಯ ”
ಬೌದ್ದ ಧರ್ಮ : ಮೂರನೇ ಜನ್ಮ
ಈ ಜನ್ಮದಲ್ಲಿ ತೀಕ್ಷ್ಣವಾದ ಕಾಂತಿಗೊಳಿಸುತ್ತಾನೆ .ಭೋಧಿಸತ್ತನ ಬೌದ್ದಿಕ ಶಕ್ತಿ ಕನ್ನಡಿಯಂತೆ ಹೊಳೆಯುತ್ತದೆ.ಅವನಿಗೆ ಈಗ ಅನತ್ತ ಮತ್ತು ಅನಿಕ್ತಗಳ ಸತ್ಯದ ಅರಿವಾಗುತ್ತದೆ.ಅವನೊಳಗೆ ಭೋಧಿಜ್ಞಾನದ ಬಯಕೆ ಹೆಚ್ಚಾಗುತ್ತದೆ.ಅವನು ಯಾವ ಪರಿ ತ್ಯಾಗಕ್ಕೂ ಸಿದ್ಧನಾಗುತ್ತಾನೆ.
ನಾಲ್ಕನೇ ಜನ್ಮ: ಈ ಜನ್ಮದಲ್ಲಿ ಪ್ರಖರವಾದ ಪ್ರಜ್ಞೆಯ ಹಂತ ತಲುಪುತ್ತಾನೆ.ನೈತಿಕ ಮತ್ತು ಸದಾಚಾರಗಳ ಸಾಧನೆ ಸ್ಥಿರಗೊಳಿಸಿ ಕೊಳ್ಳುತ್ತಾನೆ.
ಬುದ್ದನ ೩-೪ನೇ ಜನ್ಮವನ್ನು ಶರಣರ ಪ್ರಸಾದಿಸ್ಥಲದಲ್ಲಿ ವಿಲೀನಗೊಂಡಂತೆ ಕಾಣುತ್ತದೆ.
ಶರಣಧರ್ಮ :ಪ್ರಸಾದಿಸ್ಥಲ
ಈ ಸ್ಥಲದಲ್ಲಿ ಭಕ್ತನ ತನು ಮನ ಭಾವ ಕರಣೇಂದ್ರಿಯ ವಿಚಾರಗಳೊಂದಿಗೆ ಸಂಘರ್ಷ ನಡೆದು ಸುಜ್ಞಾನ ನಿಷ್ಠೆಯಿಂದ ಪರಶುದ್ದನಾಗಿ ಸರ್ವಾಂಗ ಶುದ್ದನಾಗಿ ತಾನು ತನ್ನದನ್ನೇ ಪರಮಾತ್ಮನಿಗೆ ಅರ್ಪಿಸಿ ಅರ್ಪಣೆ ಭಾವ ಹೊಂದುತ್ತಾನೆ.
” ಲಂಗಕ್ಕೆಂದು ನೆನೆವೆ ಲಿಂಗಕ್ಕೆಂದು ಮಾಡುವೆ ,ಲಿಂಗಕಕ್ಕೆಂದು ಕೊಡುವೆ ನಾನಯ್ಯ.ಸಕಲ ಪದಾರ್ಥಂಗಳ ಲಿಂಗಕ್ಕೆಂದು ಭಾವಿಸುವೆ.ಅಂಗ ಗುಣಗಳನರಿಯೆನಯ್ಯ, ಲಿಂಗಕ್ಕೆಂದು ಕಾಮಿಸುವೆನು ನಿಕಾಮಿಯಾಗಿ ,ಎನ್ನ ದೇಹೇಂದ್ರಿಯ ಮನ ಪ್ರಾಣಾದಿಗಳು ಲಿಂಗದ ಸತಿಯರಾಗಿ ಲಿಂಗಕ್ಕೆಂದು ಬಯಸಿ ಲಿಂಗ ಪ್ರಾಣಿಗಳಾದ ಕಾರಣ ಲಿಂಗಕ್ಕೆಂದು ಕೈಕೊಂಡೆನು .ಅನರ್ಪಿತವನರಿಯೆ ಕೂಡಲಸಂಗಮದೇವಾ.”
ಬೌದ್ದ ಧರ್ಮ : ಐದನೇ ಜನ್ಮ
ಈ ಜನ್ಮದಲ್ಲಿ ಭೋಧಿಸತ್ತನು ಸುದುರ್ಜಯವನ್ನು ಪಡೇಯುತ್ತಾನೆ .ಈ ಹಂತದಲ್ಲಿ ಸಂಬಂಧ ಮತ್ತು ಗರಿಷ್ಠ ಇವುಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುತ್ತಾನೆ.
ಆರನೇ ಜನ್ಮ: ಈ ಜನ್ಮದಲ್ಲಿ ಅಭಿಮುಖಿ ಹಂತವನ್ನು ತಲುಪುತ್ತಾನೆ.ಪ್ರತಿಯೊಂದು ವಸ್ತುವಿನ ವಿಕಾಸ ಅವುಗಳಿಗೆ ಕಾರಣ ಹೀಗೆ ಹನ್ನೆರಡು ಜ್ಞಾನ ಲಭಿಸಿ ಎಲ್ಲಾ ಜೀವಿಗಳ ವಿಚಾರದಲ್ಲಿಯೂ ಸಹಜವಾದ ಅನುಕಂಪವು ಮೂಡುತ್ತದೆ.
ಬುದ್ದನ ೫-೬ ಜನ್ಮಗಳು ಶರಣರ ಪ್ರಾಣಲಿಂಗಿ ಸ್ಥಲದಲ್ಲಿ ಐಕ್ಯಗೊಂಡಿವೆ ಎಂದು ಅನಿಸುತ್ತದೆ.
ಶರಣಧರ್ಮ : ಪ್ರಾಣಲಿಂಗಿ ಸ್ಥಲ
ಪ್ರಾಣಲಿಂಗಿ ಸ್ಥಲದಲ್ಲಿ ಪ್ರಾಣವು ಲಿಂಗದಲ್ಲಿ ಲೀನವಾಗಿ ಸಾಮರಸ್ಯ ಪಡೆಯುತ್ತದೆ.ಇದರಿಂದ ಕರಣಗಳಲೆಲ್ಲ ಚೈತನ್ಯವೇ ತುಂಬಿರುತ್ತದೆ.ತನುಮನಗಳ ದುರ್ವ್ಯಾಪಾರ ಅಡಗಿ ನಿರ್ಮಲವಾದ ನಿಶ್ಚಲವಾದ ಮನಸ್ಥಿರಗೊಂಡಿರುತ್ತದೆ.ಸುಜ್ಞಾನ ಅರಿವು ಆಚಾರಗಳನ್ನೆಲ್ಲಾ ಆತಲಿಂಗವೆಂದು ಪರಿಗಣಿಸುತ್ತಾನೆ.
” ನಾವು ಪ್ರಾಣಲಿಂಗಿ ಗಳೆಂದು ಹೇಳುವ ಅಣ್ಣಗಳಿರಾ ,ನೀವು ಪ್ರಾಣಲಿಂಗಿಗಳೆಂತಾದಿರಿ ಹೆಳೀರಿ ? ಅರಿಯದಿದ್ದರೆ ಕೇಳಿರಣ್ಣಾ ,ಕಾಯದ ಕಳವಳದಲ್ಲಿ ಕೂಡಿದೆ ,ಮನದ ಭ್ರಾಂತಿಗೊಳಗಾಗದೆ ,ಕರಣಂಗಳ ಮೋಹಕ್ಕೆ ಈಡಾಗದೆ , ಪ್ರಾಣ ಪ್ರಪಂಚಿನಲ್ಲಿ ಬೆರಸದೆ ,ಜೀವನ ಬುದ್ದಿಯಲ್ಲಿ ಮೋಹಿಸದೆ ,ಹಂಸನ ಆಸೆಗೊಳಗಾಗದೆ ನಿಪ್ರಪಂಚುಗಳಾಗಿ , ಶ್ರೀ ಗುರುಲಿಂಗ ಜಂಗಮದ ಪಾದೋದಕ ಪ್ರಸಾದದಲ್ಲಿ ಅತಿಕಾಂಕ್ಷೆಯುಳ್ಳಾತನೇ ಲಿಂಗ ಪ್ರಾಣನೋಡಾ ಕಲಿದೇವರ ದೇವಾ.”
ಬೌದ್ದ ಧರ್ಮ ೭-೮ಜನ್ಮ:
೭ನೆ ಜನ್ಮ:ಈ ಜನ್ಮದಲ್ಲಿ ಧಮ್ಮದ ಪೂರ್ಣ ಅರಿವು ಉಂಟಾಗುತ್ತದೆ.ಆದರೆ ಅದನ್ನು ಜನತೆಗೆ ತಿಳಿಸಲು ತಾಳ್ಮೆ ಬೆಳೆಯಬೇಕೆಂದು ಮನಗಾಣುತ್ತಾನೆ. ಜನಸಾಮಾನ್ಯರು ಅವನ ಕುರಿತು ಏನೇ ಮಾಡಿದರು ಸಮಚಿತ್ತದಿಂದ ಸಹಿಸಿಕೊಳ್ಳುತ್ತಾನೆ.ಎಲ್ಲಾ ಜೀವಿಗಳ ಒಳಿತಿಗಾಗಿ ತನ್ನ ಶಕ್ತಿಯನ್ನು ಬಳಸುತ್ತಾನೆ.
೮ನೇ ಜನ್ಮ : ಈ ಜನ್ಮದಲ್ಲಿ ಬೋಧಿಸುತ್ತನು ಅಚಲನಾಗುತ್ತಾನೆ.ನಿಶ್ಚಿಂತನಾಗುತ್ತಾನೆ.ಸದಾ ಒಳಿತನ್ನು ಅನುಸರಿಸುತ್ತಾ ಮುನ್ನೆಡೆಯುತ್ತಾನೆ.
ಬೌದ್ದಧಮ್ಮದ ೭-೮ ಜನ್ಮಗಳು ಶರಣಧರ್ಮದಲ್ಲಿ ಶರಣಸ್ಥಲದಲ್ಲಿ ಐಕ್ಯವಾಗುತ್ತವೆ.
ಶರಣಧರ್ಮ : ಶರಣಸ್ಥಲ
“ಕಾಮವಿಲ್ಲ ಕ್ರೋಧವಿಲ್ಲ ಲೋಭವಿಲ್ಲ ಮೋಹವಿಲ್ಲ ಮದವಿಲ್ಲ ಮತ್ಸರವಿಲ್ಲ ಹಸಿವು ತ್ರಷೆ ವಿಷಯ ವ್ಯಸನವ್ಯಾಪ್ತಿಗಳಿಲ್ಲ ಸಂಸಾರ ಬಂಧನ ಮುನ್ನಿಲ್ಲ ಪುಣ್ಯವಿಲ್ಲ ಪಾಪವಿಲ್ಲ ಆಚಾರ ಅನಾಚಾರವೆಂಬುದಿಲ್ಲ ಸದಾಚಾರ ಸಂಪೂರ್ಣ ಗುಹೇಶ್ವರಾ ನಿಮ್ಮ ಶರಣ.”
ಮಹಾಘನವೇ ತಾನಾದ ಬಳಿಕ ಪುಣ್ಯವಿಲ್ಲ ಪಾಪವಿಲ್ಲ
ಸುಖವಿಲ್ಲ ದುಃಖವಿಲ್ಲ
ಜನನವಿಲ್ಲ ಮರಣವಿಲ್ಲ
ಗುಹೇಶ್ವರಾ ನಿಮ್ಮ ಶರಣಂಗೆ ! ಆತ ಮಹಾಮಹಿಮ ನೋಡಾ.”
ಬೌದ್ದ ಧರ್ಮದ ೯-೧೦ ಜನ್ಮ :
೯ನೇ ಜನ್ಮದಲ್ಲಿ ಭೋಧಿಸತ್ತನು ಸಾಧುಮತಿಯಾಗುತ್ತಾನೆ.ಎಲ್ಲ ಧರ್ಮ ಮತ್ತು ದರ್ಶನಗಳನ್ನು ಭೇದಿಸಿ ಅವುಗಳನ್ನು ಜಯಿಸುವ ಕಾಲಾತೀತನಾಗುತ್ತಾನೆ.
೧೦ನೇ ಜನ್ಮ: ಭೋಧಿಸತ್ತನು ಧರ್ಮಮೇಢನಾಗುತ್ತಾನೆ ಈ ಸ್ಥಿತಿಯಲ್ಲಿ ಬುದ್ದನಾದವನಿಗೆ ದಿವ್ಯ ದೃಷ್ಟಿ ಜ್ಞಾನ ಲಭಿಸುತ್ತದೆ.
ಶರಣಧರ್ಮ: ಐಕ್ಯಸ್ಥಲ
ಈ ಸ್ಥಲದಲ್ಲಿ ನಾನು ನೀನು ದೇವಾ ಭಕ್ತವೆಂಬ ದ್ವಂದ್ವ ಭಾವಕ್ಕೆಡೆಯಿಲ್ಲ.ಶರಣನ ಅಂಗ ಮನ ಭಾವಗಳೆಲ್ಲ ಈ ಲಿಂಗದಲ್ಲಿ ಸಮರಸಗೊಂಡಿವೆ.ಭಿನ್ನ ಭಕ್ತಿ ಭಿನ್ನ ಭಾವಕ್ಕೀಗ ಅವಕಾಶವಿಲ್ಲ.ಸ್ವಯಂ ಲಿಂಗವಾಗಿ ಎಲ್ಲಾ ಕ್ರಿಯೆಗಳು ಕೈಗೊಳ್ಳುವುದು ಐಕ್ಯಸ್ಥಲ.
” ಆನು ನೀನೆಂಬುವುದು ನಾನಿಲ್ಲಿ ,ತಾನರಿದ ಬಳಿಕ ಎನೂ ಇಲ್ಲ !ಇಲ್ಲದುದು ಇಲ್ಲದುದು ಎಲ್ಲಿಪ್ಪುದೋ? ಇಲ್ಲಾದುದಿಲ್ಲಾದುದೆಲ್ಲಿಪ್ಪುದೋ?ಅನುವನರಿದು ತನುವ ಮರೆದಡೆ ಭಾವರಹಿತ ಗುಹೇಶ್ವರನ ಬಯಲು ”
ಹೀಗೆ ಬೌದ್ದ ಧರ್ಮಕ್ಕೂ ಲಿಂಗಾಯತ ಧರ್ಮಕ್ಕೂ ಚಾರಿತ್ರಿಕ ಮತ್ತು ತಾತ್ವಿಕ ಸಂಭಂದದ ಬೆಸುಗೆ ಇದೆ ಅನಿಸುತ್ತೆ.
ಲೇಖನ: ರಾಜಶೇಖರ ನಾರನಾಳ ಗಂಗಾವತಿ