ಲಿಂಗಾಯತ ಕ್ರಾಂತಿ ವಿಶೇಷ: ಹಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಿಂದ ‘MA ತತ್ವಶಾಸ್ತ್ರದಲ್ಲಿ’ Rank ಪಡೆದಾಗ, ಸ್ವಲ್ಪ ಹಣ ಕಟ್ಟಿ ಚಿನ್ನದ ಪದಕ ಪಡೆಯಿರಿ ಎಂದು ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳು ವಿನಂತಿಸಿಕೊಂಡಾಗ,ಹಣ ಕಟ್ಟಿ ತೆಗೆದು ಕೊಳ್ಳುವ ಚಿನ್ನದ ಪದಕ ನನಗೆ ಬೇಡವೆಂದು ಅದನ್ನು ತಿರಸ್ಕರಿಸಿದವರು ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು.ಅಂದಿನಿಂದ, ಇಂದಿನವರೆಗೂ ತನ್ನ ಪ್ರಚಾರಕ್ಕೆ ಮತ್ತು ಜಡಪಂಥಕ್ಕೆ ಜೊತುಬಿಳದೆ ತನ್ನ ಇತಿಮಿತಿಯಲ್ಲಿಯೆ ಕಲೆ,ಸಂಸ್ಕೃತಿ ಮತ್ತು ಬರೆಹ ಮೂಲಕ ಜನಪರ ಚಿಂತನೆಯನ್ನು ಜನಮಾನಸದಲ್ಲಿ ಬಿತ್ತಲು ಶ್ರಮಿಸುತ್ತಿದ್ದಾರೆ.
ನಾನು ಶ್ರೀಗಳನ್ನ ತೀರಾ ಸಮೀಪದಿಂದ ನೋಡಿದ್ದು ಮತ್ತು ಅವರೊಂದಿಗೆ ಒಡನಾಡಿದ್ದು ‘ಮತ್ತೆ ಕಲ್ಯಾಣ’ಅಭಿಯಾನದ ಸಂದರ್ಭದಲ್ಲಿ.’ಮತ್ತೆ ಕಲ್ಯಾಣ’ಎನ್ನುವ ಪರಿಕಲ್ಪನೆ, ಪ್ರಸ್ತುತ ಅದರ ಮಹತ್ವ ವನ್ನು ಶ್ರೀಗಳಿಗೆ ನಾವು ಮನದಟ್ಟು ಮಾಡಿಕೊಟ್ಟಾಗ ಸ್ವಲ್ಪ ಹಿಂಜರಿಕೆಯಿಂದಲೆ ಆಲೋಚನೆ ಮಾಡುತ್ತೇವೆ ಎಂದಿದ್ದರು. ಅಮೂಲಾಗ್ರವಾಗಿ ಆಲೋಚಿಸಿ,ತಮ್ಮ ಆಪ್ತರೋಡನೆ ಸಮಾಲೋಚನೆ ನಡೆಸಿ ಕೊನೆಗೂ ಮಾಡೋಣ ಎಂದಾಗ ನನಗೆ ಅತಿ ಆನಂದವಾಗಿತ್ತು.ಶ್ರೀಗಳ ಮುತುವರ್ಜಿ, ಬದ್ಧತೆ ಮತ್ತು ಅನೇಕ ಜನರ ದುಡಿಮೆಯಿಂದ ರಾಜ್ಯದೆಲ್ಲೆಡೆ ಸದ್ದು ಮಾಡಿ ಕೆಲವು ಅಡೆತಡೆಗಳ ಮಧ್ಯ ಅಭಿಯಾನ ನಮ್ಮ ನಿರೀಕ್ಷಿಗೂ ಮೀರಿ ಯಶಸ್ವಿಯಾಯಿತು.
ಮಠ,ಪೀಠ,ಪೂಜ್ಯ,ಶ್ರೀ ಶ್ರೀ ಶ್ರೀ,ನಡೆದಾಡುವ ದೇವರು,ಜಗದ್ಗುರು…ಇತ್ಯಾದಿ ಇತ್ಯಾದಿ ಪದಪುಂಜಗಳು ಲಿಂಗಾಯತ ಸಂಸ್ಕೃತಿಯ ವಿರುದ್ಧ ಮಠಿಯ ವ್ಯವಸ್ಥೆ ಅರ್ಥಾತ್ ವೈದಿಕ ವ್ಯವಸ್ಥೆ ಗಟ್ಟಿಗೊಳಿಸಲು ಹೆಣೆದಿರುವಂತಹವೂ.ಈ ಪ್ರತಿಗಾಮಿ ಮಠಿಯ ವ್ಯವಸ್ಥೆಗೂ ಮತ್ತು ಬಸವಣ್ಣನವರಿಗೂ ಯಾವ ಬಾದರಾಯಣಸಂಬಂಧವೂ ಇಲ್ಲ. ಲಿಂಗಾಯತ ಸಂಸ್ಕೃತಿ ಅದು ಅಪ್ಪಟ್ಟ ಶರಣ ಸಂಸ್ಕೃತಿ, ಶ್ರಮ ಸಂಸ್ಕೃತಿ, ರೈತಾಪಿ ಸಂಸ್ಕೃತಿ ಒಟ್ಟಿನಲ್ಲಿ ಅದೊಂದು ಜನಪರವಾದ ಸಂಸ್ಕೃತಿ. ಇದಕ್ಕೆ ವಿರುದ್ಧವಾಗಿ ಹುಟ್ಟಿದ್ದು ಮಠ ಸಂಸ್ಕೃತಿ ಇದೊಂದು ಜಡ ಸಂಸ್ಕೃತಿ,ಜನವಿರೋಧಿ ಸಂಸ್ಕೃತಿಯಾದದು.ಈ ಮಠಿಯ ವ್ಯವಸ್ಥೆ ಪಾಳೆಗಾರಿಯೆಕೆ ಪಳೆಯುಳಿಕೆ ಎನ್ನುವುದು ಸುಳ್ಳಲ್ಲ.
ನಮ್ಮಂತವರು ಮಠಗಳಿಂದ ಸಾವಿರಾರು ಮೈಲು ದೂರವೆ ಇರಲು ಇಷ್ಟ ಪಡುತ್ತೇವೆ. ಏಕೆಂದರೆ ಮಠಗಳ ಹೊಸ್ತೀಲು ತುಳಿದರೆ ಮಠದೊಳಗಣ ಸ್ವಾಮೀಜಿಯ ಪಾದಕ್ಕೆ ಉದ್ಧಂಡ ಬಿಳುವ ಜನರ ಸಾಲು ಕಾಣುತ್ತದೆ. ನಾವು ಅಪ್ಪಿತಪ್ಪಿ ಮಠದ ಸ್ವಾಮೀಜಿಯ ಕಾಲಿಗೆ ಡೈ ಹೊಡೆಯದಿದ್ದರೆ ನಮ್ಮ ಮೇಲೆ ಕೆಂಗಣ್ಣು ಮಾಡಿಕೊಂಡು ವಾರೆನೋಟ ಬೀಳುತ್ತವೆ.ಆದರೆ ನಾನು ಹತ್ತಾರು ಸಲ ಸಾಣೇಹಳ್ಳಿ ಮಠಕ್ಕೆ ಹೋಗಿರಬಹುದು ಒಂದ್ಸಲವೂ ಸಹ ನಾನು ಶ್ರೀಗಳ ಕಾಲಿಗೆ ಬಿಳಲಿಲ್ಲ.ಪ್ರೀತಿಯಿಂದ ಶರಣಾರ್ಥಿ ಹೇಳುತ್ತಿದೆ.ಅದಾಗ್ಯೂ ಶ್ರೀಗಳ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣದೆ ನಮ್ಮೊಂದಿಗೆ ಅದೇ ಪ್ರೀತಿಯಿಂದ ಮಾತಾಡುವುದು ಕಂಡು ಮೊದಲಿಗೆ ನನಗೆ ಆಶ್ಚರ್ಯವಾಗಿತ್ತು.ನಮ್ಮ ತರಹ ಕಾಲಿಗೆ ಬಿದ್ದು ನಮಸ್ಕಾರ ಮಾಡದ ನುರಾರು ಪ್ರಗತಿಪರ ಜನರು ಅವರ ಆಪ್ತರಿದ್ದದು ಕಂಡಿದ ಮೇಲೆ ಸಂತೋಷವಾಯಿತು. ನನ್ನ ದೃಷ್ಟಿಯಲ್ಲಿ ಒಬ್ಬ ಮನುಷ್ಯ, ತನ್ನ ಸಹಮಾನವರಿಂದ ಕಾಲಿಗೆ ಬಿದ್ದು ನಮಸ್ಕರಿಸಿಕೊಳ್ಳುವುದು ಮಾನಸಿಕ ಗುಲಾಮಗಿರಿತನದ ಸಂಕೇತ.ಅದೊಂದು ಮೌಢ್ಯ.ಅದೊಂದು ಬಸವ ವಿರೋಧಿ ಕ್ರಿಯೆ. ಏಕೆಂದರೆ ಅನುಭವ ಮಂಟಪದಲ್ಲಿದ್ದ ಸಾವಿರಾರು ತಳವರ್ಗದವರ ಜನರ ಬದುಕಿನಲ್ಲಿ ಬೆಳಕು ಮೂಡಿಸಿದ ಬಸವಣ್ಣನವರ ಕಾಲಿಗೆ ಒಬ್ಬನೇ ಒಬ್ಬ ಶರಣ ಬಿದ್ದಿರುವ ಒಂದೇ ಒಂದು ನಿದರ್ಶನ ದುರ್ಬಿನ ಹಾಕಿ ಹುಡುಕಿದರೂ ನಮಗೆ ಸಿಗುವುದಿಲ್ಲ.ಮುಂದೊಂದು ದಿನ ಲಿಂಗಾಯತ ಮಠಗಳೆಲ್ಲವೂ ಮಹಾಮನೆಗಳಾದರೆ ಮಠಾಧೀಶರು ಈ ಮೌಢ್ಯದಿಂದ ಹೊರಗೆ ಬರಬಹುದು.
ತೊಂಬತ್ತರ ದಶಕಗಳ ಹಿಂದೆ ‘ಅಕ್ಷರ ಮತ್ತು ದಾಸೋಹ’ ಬಹುತೇಕ ಲಿಂಗಾಯತ ಮಠದ ಉಸಿರಾಗಿತ್ತು.ಜಾಗತೀಕರಣದ ಪ್ರಭಾವದಿಂದ ಇಂದು ಬಹುತೇಕ ಮಠಗಳು ‘ಬಸವ ಕಾರ್ಪೊರೇಟ್ ಸೆಂಟರ್’ ಗಳಾಗಿ ರೂಪಾಂತರಗೊಂಡಿವೆ.ಇಂದು ಬಹುತೇಕ ಮಠಗಳು ಧನದಾಹಕ್ಕೆ ಬಿದ್ದು ಶಿಕ್ಷಣವನ್ನು ಮಾರಾಟ ಮಾಡುವ ಕೇಂದ್ರಗಳಾಗಿವೆ.
ಇವೆಲ್ಲವುಗಳ ಮಧ್ಯೆ ಅಲಲ್ಲಿ ಬೆರಳೆಣಿಕೆಯಷ್ಟು ಸ್ವಾಮೀಜಿಗಳು ಇಂದಿಗೂ ಜನಪರವಾಗಿ ಆಲೋಚನೆ ಮಾಡುವವರು ನಮ್ಮ ಮಧ್ಯದಲ್ಲಿ ಇರುವುದು ಸುಳ್ಳಲ್ಲ.ತನ್ನ ಇತಿಮಿತಿಯಲ್ಲಿಯೆ ಬಸವ ತತ್ವವನ್ನು ಪಸರಿಸಲು ಶ್ರಮಿಸುತ್ತಿದ್ದಾರೆ.ಇವರಲ್ಲಿ ಸಾಣೇಹಳ್ಳಿ ಶ್ರೀಗಳು ಪ್ರಮುಖರು.
ತನ್ನ ಇಳಿವಯಸ್ಸಿನಲ್ಲಿಯೂ ಅಪಾರ ಓದು-ಬರವಣಿಗೆ, ವಾಗ್ವಾದ ಸಂಸ್ಕೃತಿಗೆ ನೀಡುವ ಗೌರವ, ದಿಟ್ಟತನ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅವರಲ್ಲಿರುವ ತಾಯ್ತನ ನನಗೆ ಸೆಳೆದಿದ್ದು.ಮತ್ತೆ ಕಲ್ಯಾಣ ಅಭಿಯಾನದ ಸಂದರ್ಭದಲ್ಲಿ ನಮ್ಮಿಬ್ಬರ ಮಧ್ಯೆ ಅನೇಕ ವಿಷಯದಲ್ಲಿ ಭಿನ್ನಾಭಿಪ್ರಾಯ ಬಂದು,ಶ್ರೀಗಳೊಂದಿಗೆ ನಾನು ಆಡಿರುವ ಜಗಳಗಳು ಲೆಕ್ಕಕ್ಕೆ ಸಿಗುವುದಿಲ್ಲ. ಕೆಲವು ಸಲ ಅವರಿಗೆ ಕಠೋರವಾಗಿಯೇ ಮಾತಾಡಿದ್ದೇನೆ. ನನ್ನ ಯಾವ ಮಾತುಗಳು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಅದೇ ಪ್ರೀತಿಯಿಂದ ಮರುಘಳಿಗೆಯಲ್ಲಿ ಮಾತಾಡುತ್ತಿದ್ದರು.
ಅವರಾಡುವ ನೇರ-ನಿರ್ಭೀತಿಯಿಂದ ಕೂಡಿರುವ ಮಾತುಗಳು ಕೆಲವರಿಗೆ ಕಹಿಗುಳಿಗೆಗಳಂತೆ.ಇತ್ತೀಚೆಗೆ ಕೆಲವು ಮೂಲಭೂತವಾದಿಗಳು ಶ್ರೀಗಳ ಪ್ರತಿಯೊಂದು ಮಾತಿನಲ್ಲಿ ತಪ್ಪು ಹುಡುಕುವುದೇ ಕಾಯಕ ಮಾಡಿಕೊಂಡಿದ್ದಾರೆ. ಕೆಲವರು ಅವರಿಗೆ ಕಳಪೆ ಭಾಷೆಯಲ್ಲಿ ಪತ್ರ ಬರೆಯುವುದು, ಫೋನ್ ಮೂಲಕ ಮತಾಂಧವಾಗಿ ಮಾತಾಡುವುದು ಮಾಡುತ್ತಿದ್ದಾರೆ.ನಾನು ಕಂಡಂತೆ ಶ್ರೀಗಳು ಆರೋಗ್ಯಕರವಾದ ಚರ್ಚೆಯನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಾರೆ.ಚರ್ಚೆಗೆ ಅದರದೇ ಆದ ಒಂದು ಭಾಷೆಯಿದೆ.ಆ ಭಾಷೆಯಲ್ಲಿ ಅವರೊಂದಿಗೆ ಚರ್ಚೆಗೆ ಬಂದರೆ ಖಂಡಿತವಾಗಿಯೂ ಅಂತವರೊಂದಿಗೆ ಚರ್ಚೆ ನಡೆಸುತ್ತಾರೆ. ಶ್ರೀಗಳು ಮೂಲತಃ ಜಂಗಮ ಮನೆತನದಿಂದ ಬಂದಿದರೆ ಅವರ ವಿರುದ್ಧ ಈ ದಾಳಿಗಳು ನಡೆಯುತ್ತಿರಲಿಲ್ಲ ಎನ್ನುವುದು ನನ್ನ ಖಚಿತ ನಂಬಿಕೆಯಾಗಿದೆ.ಇವತ್ತು ಅವರ ಜೀವಪರ ಕಾಳಜಿ, ಕಾಯಕ ನಿಷ್ಠೆ, ನೇರ ನಡೆನುಡಿಯಿಂದ ಅಂಸಂಖ್ಯಾತ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.ವಿಶೇಷವಾಗಿ ಬಸವತತ್ವ ನಿಷ್ಠ ಯುವಜನತೆ ಅವರನ್ನು ಅಪಾರವಾಗಿ ಪ್ರೀತಿಸುತ್ತಿದೆ.
ಹುಟ್ಟು ಹಬ್ಬದ ಮನದುಂಬಿ ಶುಭಾಶಯಗಳು ಸ್ವಾಮೀಜಿ. ಬಸವಾದಿಗಳ ಬೆಳಕಿನಲ್ಲಿ ನೂರ್ಕಾಲ ಆರೋಗ್ಯವಂತರಾಗಿ ಬಾಳಿ.
– ಸಿದ್ದಪ್ಪ ಮೂಲಗೆ.