ಭಾಲ್ಕಿ: ನಡೆದಾಡುವ ದೇವರು, ನೂತನ ಅನುಭವ ಮಂಟಪದ ರೂವಾರಿ, ಕಾಯಕ ನಿಷ್ಠೆ-ದಾಸೋಹದ ಕರುಣಾ ಮೂರ್ತಿ, ಅನಾಥರ-ನೊಂದವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ-ಬೆಳೆಸಿದ ಕನ್ನಡ ಭಾಷಾಪ್ರೇಮಿ, ವಚನ ಸಾಹಿತ್ಯ ತತ್ವಗಳನ್ನು ವಿಶ್ವಸಮುದಾಯಕ್ಕೆ ಪಸರಿಸಿದ ಮೇಧಾವಿ ಸಂತ, ಸರಳತೆಯನ್ನು ಮೈಗೂಡಿಸಿಕೊಂಡು ಕಾಯಕ ನಿಷ್ಠೆಯ ಸನ್ಮಾರ್ಗದಲ್ಲಿ ಸಾಗುವ ಮೂಲಕ ಈ ಜಗತ್ತಿಗೆ ಮಾದರಿಯಾಗಿ ಬದುಕಿ, ಇತರರಿಗೆ ಆದರ್ಶ ಚೇತನರಾಗಿ ಬಾಳಿದರು ನಮ್ಮ ಹೆಮ್ಮೆಯ ಕಲ್ಯಾಣದ ಪ್ರಜ್ವಲ ಜ್ಯೋತಿ ಭಾಲ್ಕಿ ಹಿರೇಮಠ ಸಂಸ್ಥಾನದ ಪರಮ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು ಹಾಗಾಗಿ ಇವರನ್ನು 21ನೇಯ ಶತಮಾನದ ಶ್ರೇಷ್ಠ ಮಾಹಾಶಿವಶರಣರು ಎಂದೇ ಜನಸಾಮಾನ್ಯರ ಪ್ರೀತಿ-ಅಕ್ಕರೆಯ ಮಾತುಗಳಿಂದ ಈ ನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ. 12 ನೇಯ ಶತಮಾನದ ಬಸವಾದಿ ಶಿವಶರಣರ ವಚನ ಸಾಹಿತ್ಯದ ಸಂದೇಶಗಳನ್ನು ಅಪ್ಪಿ-ಒಪ್ಪಿ, ಹೊತ್ತು , ಅರುವೇ ಗುರುವಿನ ಮಾರ್ಗದ ಮೂಲಕ ಶರಣ ಸಾಹಿತ್ಯ ಸಾತ್ವಿಕ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಕೇವಲ ಭಾಷಣ-ಪ್ರವಚನಕ್ಕೆ ಸೀಮಿತವಾಗದೇ, ಸಾಮಾಜಿಕ ಸಮಾನತೆ, ದೀನ ದಲಿತರ, ಶೋಷಿತರ, ಬಡವರ-ನೊಂದವರ ಜೊತೆಯಲ್ಲಿ ನಿಲ್ಲುವ ಮೂಲಕ ಬಸವಾದಿ ಶರಣರ ಹಾದಿಯಲ್ಲಿ ಸಾಗುವ ಸಮಾನತೆಯ ವೈಚಾರಿಕ ಕ್ರಾಂತಿ ಮಾಡಿದ್ದಾರೆ ಜೊತೆಗೆ ಗಡಿಭಾಗದಲ್ಲಿ ಕನ್ನಡ ಭಾಷೆ ಅವನತಿಯ ಹಂತದಲ್ಲಿ ಇದ್ದಾಗ ಕನ್ನಡವನ್ನು ಸಂರಕ್ಷಣೆ ಮಾಡುವ ಮೂಲಕ ಕರ್ನಾಟಕದ ಕನ್ನಡ ಭಾಷೆಗೆ ಹೊಸ ಆಯಾಮ ನೀಡಿದ ಶ್ರೇಯಸ್ಸು ಹಾಗೂ ಕನ್ನಡವನ್ನು ಉಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಮತ್ತು ಸಲ್ಲಬೇಕು ಮತ್ತು ಕನ್ನಡವನ್ನು ವಿಶ್ವ ಭಾಷೆಗಳಿಗೆ ಸಮಾನವಾಗಿ ಬೆಳೆಸುವ ಅನುಪಮ ಸೇವೆಯನ್ನು ಕನ್ನಡ ಭಾಷೆಗೆ, ಸಾಹಿತ್ಯ ಲೋಕಕ್ಕೆ ಮಾಡಿರುವ ಹಿರಿಮೆ ಚನ್ನಬಸವ ಪಟ್ಟದ್ದೇವರದಾಗಿದೆ. ಬಂಧುಗಳೇ ಇದಲ್ಲದೇ ಈ ಭಾಗದ ಜನತೆಗೆ ಶರಣರ ಸಮಾಜಿಕ ಸಾಮರಸ್ಯದ ಸ್ನೇಹಯಮಯ ಜೀವನದ ಭಾಗಗಳಾದ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ,ಸಂಗೀತ ಮೊದಲಾದ ರಂಗಗಳಿಗೆ ಹೆಚ್ಚು ಕಲಿಕೆಗಾಗಿ ಪ್ರೇರಣೆದಾಯಕ ಕೆಲಸಗಳನ್ನು ಮಾಡಿದ್ದಾರೆ.ಮತ್ತು ಪ್ರಾಧಾನ್ಯ ನೀಡಿದ್ದಾರೆ.ಎಂತಹದೇ ಕಷ್ಟದ ಸಮಯದಲ್ಲಿಯೋ ನಾಡು ನುಡಿ – ಭಾಷೆ, ಸಂಸ್ಕೃತಿಯ, ಆಚಾರ – ವಿಚಾರಗಳ ವಿಷಯದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳದೇ – ಸ್ವಾರ್ಥಕ್ಕೆ ಬಲಿಯಾಗದೆ, ಹೊರಗೆ ಉರ್ದು ಫಲಕ ಹಾಕಿ,ಒಳಗಡೆ ಕನ್ನಡ ಕಲಿಸಿದ್ದು ಐತಿಹಾಸಿಕ ಕಾರ್ಯ ಎನ್ನುವುದು ಸುಳ್ಳಲ್ಲ, ಇದು ಇವರು ಕರ್ನಾಟಕ ರಾಜ್ಯಕ್ಕೆ, ಕನ್ನಡ ಬಾಷಾ ಲೋಕಕ್ಕೆ ಸಲ್ಲಿಸಿದ ಬಹು ದೊಡ್ಡ ಕನ್ನಡದ ಸೇವೆ ಅಂದರೆ ತಪ್ಪಾಗಲಾರದು.
ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ ಅಂದರೆ
ಪ್ರಜಾಪ್ರಭುತ್ವದ ಹಕ್ಕಿಗಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಸೀಗುವಲ್ಲಿ ಸಹ ಇವರ ಸೇವೆ ಮರೆಯಲಾಗದು ಜೊತೆಗೆ ಈಗಿನ ಕಲ್ಯಾಣ ಕರ್ನಾಟಕ
ಭಾಗದ ವಿಮೋಚನೆಗಾಗಿ ಹೋರಾಟ ಮಾಡಿದರು, ನಂತರ ಕರ್ನಾಟಕ ಏಕೀಕರಣಕಾಗಿ ಹಗಲಿರುಳು ದುಡಿದರು. ಕರ್ನಾಟಕ ರಾಜ್ಯ ಸಮಗ್ರಹ ಅಭಿವೃದ್ಧಿಗಾಗಿ ಹಲವಾರು ಕನಸುಗಳನ್ನು ಕಟ್ಟಿಕೊಂಡು ಕಾರ್ಯಪೃವತ್ತರಾಗಿ ಕಾಯಕ ಮಾಡಿದ್ದರು.ಕನ್ನಡ ಭಾಷಾಭಿಮಾನವನ್ನು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತಾ,ವಚನ ಸಾಹಿತ್ಯ ತತ್ತ್ವದ ಸಾರವನ್ನು ಜನಸಮುದಾಯಕ್ಕೆ ಧಾರೆಯೆರೆದರು, ಕೃಷಿ ಕಾಯಕ ಇವರ ಅಚ್ಚುಮೆಚ್ಚಿನ ಕಾಯಕವಾಗಿತ್ತು,ಕೃಷಿ ಕಾಯಕದಲ್ಲಿ ಸಂತೃಪ್ತಿ ಜೀವನವನ್ನು ಕಂಡರು.
ಶರಣರ ಮೌಲ್ಯಾಧಾರಿತ ಜೀವನದ ಕುರಿತು ಜನರಿಗೆ ವಚನಗಳ ವೈಜ್ಞಾನಿಕ ನಿಲುವುಗಳ ಅರಿವು ತಿಳಿಸುವ ಮೂಲಕ ಮನದಟ್ಟು ಮಾಡಿಕೊಡುತ್ತಿದ್ದರು. ಹೀಗೆ ಕನ್ನಡ ಭಾಷೆ ಅಭಿಮಾನ ಮತ್ತು ಬಸವತತ್ವ ಪ್ರಚಾರವನ್ನು ಸಮಾನವಾಗಿ ನಾಡಿನಾದ್ಯಂತ ಪಸರಿಸಿದರು.
ಸಮಾನತೆಗಾಗಿ: ಅಂದಿನ ಸಮಾಜದಲ್ಲಿ ದಲಿತರಿಗೆ ಸಮಾನತೆಯ ಭಾಗ್ಯ ಇರಲಿಲ್ಲ, ಹಾಗೆ ಮೇಲ್ವರ್ಗದ ಜನರ ಗಲ್ಲಿಗಳಲ್ಲಿ ಕುಡಿಯುವ ನೀರನ್ನು ಉಪಯೋಗಿಸಲು ಸಹ ಬೀಡುತ್ತಿರಲಿಲ್ಲಾ – ಕೊಡುತ್ತಿರಲಿಲ್ಲ ಹಾಗಾಗಿ ಇದನ್ನು ಕಂಡ ಪಟ್ಟದ್ದೇವರು ಇಂತಹ ಹೀನ ಪದ್ಧತಿಗೆ ತೀಲಾಂಜಲಿ ನೀಡಬೇಕೆಂಬ ಉದ್ದೇಶದಿಂದ ದಲಿತರನ್ನು ತಮ್ಮ ಮಠಕ್ಕೆ ಕರೆಯಿಸಿ ಮೊಟ್ಟ ಮೊದಲ ಬಾರಿಗೆ (ಶ್ರೀಮಠದ) ಬಾವಿಯ ನೀರನ್ನು (ದಲಿತರ)ಮನೆಗೆ ಒಯ್ಯಲು ಮತ್ತು ಕುಡಿಯಲು ಕೊಟ್ಟರು,ಕೊಡುವ ಮೂಲಕ ಭಾಲ್ಕಿಯಲ್ಲಿ ಸತತವಾಗಿ ಬರಗಾಲ ಬಂದಾಗ ದಲಿತ ಬಂಧುಗಳಿಗೆ ಮಠದ ಬಾವಿಯ ನೀರು ಒಯ್ಯಲು ತಿಳಿಸಿದರು, ತಿಳಿಸುವ ಮೂಲಕ ಶರಣರ ವಾಣಿಯಂತೆ ನಡೆದರು ಜೊತೆಗೆ ದಲಿತರಿಗೆ ಲಿಂಗಾಯತ ಧರ್ಮದ ಲಿಂಗದೀಕ್ಷೆ ನೀಡಿದರು ತರುವಾಯ ಅವರೊಂದಿಗೆ ಲಿಂಗಾಯತರ ಸಂಬಂಧ ಬೆಳೆಸಲು ಶ್ರಮಿಸಿದರು ಹಾಗೂ ಶ್ರೀಗಳ ಇಷ್ಟಲಿಂಗ ಪೂಜಾ ಸಮಯದಲ್ಲಿ (ಶ್ರೀಗಳ ಕೋಣಿಯಲ್ಲಿ) ದಲಿತರಿಗೆ ಪ್ರವೇಶ ನೀಡುವ ಮೂಲಕ ಸಮಾನತೆಯನ್ನು ಮೆರೆದರು ಜೊತೆಗೆ ಸಹ ಪಂಕ್ತಿ (ಸಹಭೋಜನ) ಭೋಜನ ಮಾಡುವ ಔರ್ದಾಯ ಮಾಡಿ ಸಮಾನತೆಗೆ ಸಾಕ್ಷಿಕರಿಸಿದ್ದರು. ಸರ್ವರೂ ಸಮಾನರು ಎನ್ನುವ ಬಸವಣ್ಣನವರ ಆಶಯಗಳನ್ನು ಜಾರಿಗೆ ತಂದ ಕೀರ್ತಿ ಇವರದಾಗಿತ್ತು ಮತ್ತು ಅವರ ಗಲ್ಲಿಗಳಿಗೆ ತೆರಳಿ ಶರಣರ ಸಂದೇಶಗಳನ್ನು ತಿಳಿಸುವ ಕಾರ್ಯ, ಅವರ ಮನೆಗಳಲ್ಲಿ ಪ್ರಸಾದ ಮಾಡುವ ಪದ್ಧತಿ,ಅವರ ಮಕ್ಕಳಿಗೆ ಉಚಿತವಾಗಿ ವಿಧ್ಯಾಭ್ಯಾಸ, ಉದ್ಯೋಗವಕಾಶ,ಮಹಿಳೆಯರಿಗೆ ಸಮಾನ ಹಕ್ಕಿನ ಆದ್ಯತೆ,ಶ್ರೀಮಠದಲ್ಲಿ ಅವರಿಗೆ ಮುಕ್ತವಾದ ಸ್ವಾತಂತ್ರ್ಯ,ಆತ್ಮಸ್ಥೈರ್ಯ ತುಂಬಿರುವುದು ಸೇರಿ ಇತ್ಯಾದಿ ಹಲವಾರು ಕೆಲಸಗಳನ್ನು ಚಾಚೂ ತಪ್ಪದ ಮಾಡುವ ಮೂಲಕ ಶ್ರೀಮಠದ ಘನತೆಯನ್ನು ಹೆಚ್ಚಿಸಿದ್ದರು.ತರುವಾಯ ಬಸವಾದಿ ಶರಣರ ಸನ್ಮಾರ್ಗದಲ್ಲಿ ಸಾಗುವ ಕೆಲಸದ ಜೊತೆ ಸಮಾನತೆ, ಸಹೋದರತೆ,ಸಹಬಾಳ್ವೆಗಳನ್ನು ಪ್ರಮಾಣಿಕವಾಗಿ ಜಾರಿಗೆ ತರಲು ಶ್ರಮಿಸಿದ್ದಾರೆ.ಹೀಗೆ ಅನೇಕ ಸಮಾಜಿಕ ಸಮಾನತೆಯ ಸಾರುವ ಸೇವೆಗಳ ಮೌಲ್ಯಗಳನ್ನು ಕೆಳವರ್ಗದ ಜನರಲ್ಲಿ ಯಶಸ್ವಿಯಾಗಿ ಬಿತ್ತುವ ಕಾಯಕವನ್ನು ಅವರ ಬದುಕಿನ ಉದ್ದಕ್ಕೂ ಮಾಡಿಕೊಂಡು ಬಂದಿರುತ್ತಾರೆ. ಸರ್ವ ಜನಾಂಗದಲ್ಲಿ ವಚನ ಸಾಹಿತ್ಯ ಸಿದ್ದಾಂತದ ಜೀವಾಳವನ್ನು ಬೇರೂರಿಸಿದ್ದಾರೆ.
ಅನಾಥರ ರಕ್ಷಕ:
ಭಾಲ್ಕಿಯ ಶ್ರೀ ಮಠದಲ್ಲಿ ಕೇವಲ ಹತ್ತಾರು ಮಕ್ಕಳಿಂದ ಆರಂಭವಾದ ವಸತಿ ನಿಲಯದಲ್ಲಿ ಇಂದು ಸುಮಾರು 1000ಕ್ಕೂ ಹೆಚ್ಚು ಮಕ್ಕಳು ಯಾವುದೇ ಜಾತಿ, ಮತಭೇದವಿಲ್ಲದೆ ಸೌಹಾರ್ದತೆಯಿಂದಿದ್ದಾರೆ ಎಂದರೆ ಅದಕ್ಕೆ ಸ್ವೋರ್ತಿ ಮತ್ತು ಪ್ರೇರಣೆ ಪಟ್ಟದ್ದೇವರು ಎಂಬುದನ್ನು ನಾವಾರೊ ಮರೆಯಬಾರದು ಹಾಗೆ ಅನಾಥ ಮಕ್ಕಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅಂತೆಯೇ ಅಲ್ಲಿ ಉಳಿದುಹೋದ ಅನೇಕ ಮಕ್ಕಳು ಇಂದು ದೇಶದ ಪ್ರತಿಷ್ಠಿತ ಉನ್ನತ ಹುದ್ದೆಯಲ್ಲಿದ್ದಾರೆ. ದೀನದಲಿತರ,ಅನಾಥರ, ಬಡವರ ಮಕ್ಕಳನ್ನು ಚನ್ನಬಸವ ಪಟ್ಟದ್ದೇವರು ಅವರ ಅಂತಃಕರಣದ ಮಾನವೀಯ ದೃಷ್ಠಿಯ ಆತ್ಮೀಯತೆಯಿಂದ ಎಲ್ಲಾ
ಮಕ್ಕಳುನ್ನು ನೋಡಿಕೊಳ್ಳುತ್ತಿದ್ದರು. ಅಂತೆಯೇ ಆ ಎಲ್ಲಾ ಮಕ್ಕಳು ಅವರಲ್ಲಿದ ನೋವುಗಳನ್ನು ಮರೆಯುತ್ತಿದ್ದರು. ಹಾಗಾಗಿ ಮಕ್ಕಳಿಗೆ ಚೆನ್ನಬಸವ ಪಟ್ಟದ್ದೇವರು ಎಂದರೆ ಎಲ್ಲಿಲ್ಲದ ಪ್ರೀತಿ – ಗೌರವ ಭಾವವಿತ್ತು ಎಂಬುವದಂತು ನೂರಕ್ಕೆ ನೂರರಷ್ಟು ಸತ್ಯ ಬಂಧುಗಳೇ.
ಶ್ರೀಗಳ ಬದುಕು ಮತ್ತು ಕಾಯಕ:
ಶ್ರೀ ಚನ್ನಬಸವ ಪಟ್ಟದ್ದೇವರ ಬದುಕು ಸರಳ,ಸಜ್ಜನೀಕೆಯಿಂದ ಕೂಡಿತು , ನಿಷ್ಠಂಳಕ ಮನಸ್ಸು, ಶರಣ ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಶ್ರೀಗಳು ನಿರಂತರ ಕೃಷಿ ಕಾಯಕ ಮಾಡುತ್ತಿದ್ದರು. ಕಾಯಕದಲ್ಲಿ ಮೇಲು ಕೀಳು ಎಣಿಸುತ್ತಿರಲ್ಲಿಲ್ಲ. ಕಾಯಕವೇ ಮನುಷ್ಯರ ಬಾಳಿನ ಬೆಳಕು ಎಂದು ತಿಳಿದುಕೊಂಡಿದ್ದರು ಹಾಗಾಗಿ ಅವರವರ ಬುದ್ದಿ, ಶಕ್ತಿ ಅನುಸಾರವಾಗಿ ಕಾಯಕವನ್ನು ಮಾಡಿಕೊಂಡು ಬಾಳಬೇಕೆಂದು ಶ್ರೀಗಳು ಕರೆ ನೀಡುತ್ತಿದ್ದರು.
ಮಿತ ಆಹಾರದ ಶ್ರೀಗಳು, ಖಾದಿ ಕಾವಿಬಟ್ಟೆ ಯಾವಾಗಲೂ ಬಳಸುತಿದ್ದರು ಹಾಗೆ ಎಂದು ಅವರು ಆಧುನಿಕತೆಗೆ ಮಾರು ಹೋಗಲಿಲ್ಲಾ, ಬದುಕಿನ ಕೊನೆಯ ದಿನಗಳ ವರೆಗೂ ಹಲ್ಲುಜ್ಜಲು ಬೇವಿನ ಕಡ್ಡಿಯನ್ನೇ ಬಳಸುತಿದ್ದರು. ಹೀಗೆ ಮಿತ ಆಹಾರ, ಸಾಮಾನ್ಯ ಹಾಸಿಗೆ, ಸರಳ ನಡೆ ನುಡಿ ಹೊಂದಿದ್ದ ಶ್ರೀಗಳು ತಮ್ಮೆಲ್ಲ ಜ್ಞಾನ – ಶಕ್ತಿಯನ್ನು ತಮ್ಮ ಸುತ್ತಲಿನ ಅಭಿವೃದ್ಧಿ ಕೆಲಸಕ್ಕೆ ಹಾಗು ಶರಣ ತತ್ತ್ವ ಪ್ರಸಾರಕ್ಕೆ ಬಳಸಿ ಕೊಂಡಿದ್ದು ನಮ್ಮಗೆ ಎದ್ದು ಕಾಣುತ್ತದೆ. ಅವರ ಕಾಯಕ ನಿಷ್ಠಯಂತು ಯಾರಿಂದಲೂ ಉಹಿಸಲು ಸಾಧ್ಯವಿಲ್ಲ. ಏಕೆಂದರೆ ತಾವೇ ಮುಂದೆ ನಿಂತು ತಲೆಯ ಮೇಲೆ ಕಲ್ಲುಗಳನ್ನು ಹೊತ್ತು ಅನುಭವ ಮಂಟಪ ಕಟ್ಟಿದ್ದಾರೆ ಎನ್ನುವುದು ನಾವೆಲ್ಲರೂ ಹೇಗೆ ಮರೆಯಲು ಸಾಧ್ಯ, ಹಾಗಾಗಿ ಅವರ ಕಾಯಕ ಸಿದ್ದಾಂತದ ಬಗೆ ನಾವೆಲ್ಲರೂ ಆತ್ಮಸಾಕ್ಷಿ ಯಾಗಿ ಚಿಂತನೆ ಮಾಡಬೇಕಾದ ದೊಡ್ಡ ವಿಚಾರ ಅಲ್ಲವೇ , ಅವರು ಕಾಯಕ ಬದುಕಿನ ಮೇಲೆ ಇಟ್ಟ ಗೌರವದ ನಿಷ್ಠೆ – ಕಾಳಜಿಯಿಂದ ಇಂದಿನ ಕಾಯಕವರ್ಗದವರಿಗೆ ಮಾರ್ಗದರ್ಶಕರಾಗಿ ಕಂಗೊಳಿಸುತ್ತಿದ್ದಾರೆ.ಆದ್ದರಿಂದ ಸ್ನೇಹಿತರೇ ಶ್ರೀಗಳ ಆಶಯದಂತೆ ಇಂದು ನಾವೆಲ್ಲರೂ ನಮ್ಮ ಜೀವನದಲ್ಲಿ ಕಾಯಕ ಶ್ರದ್ಧೆಯನ್ನು ಅಳವಡಿಸಿಕೊಳ್ಳುವ ಮೂಲಕ ಜಾಗತಿಕ ಪ್ರಪಂಚಕ್ಕೆ ಮಾದರಿಯಾಗಬೇಕಾಗಿದೆ.
ನೂತನ ಅನುಭವ ಮಂಟಪದ ರೂವಾರಿ:
12ನೆಯ ಶತಮಾನದ ಬಸವಾದಿ ಶರಣರ ಸಮತವಾದದ ಮೌಲ್ಯಾಧಾರಿತ ಸಮಾಜೋಧಾರ್ಮಿಕ ಕ್ರಾಂತಿ ಅದು ನಡೆದದ್ದು ಅನುಭವ ಮಂಟಪದ ಮೂಲಕವೇ, ಮನುಷ್ಯರ ಬದುಕಿನ ಎಲ್ಲಾ ಆಯಾಮಗಳ ಚಿಂತನೆಗಾಗಿ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೋಳ್ಳುವುದಕ್ಕಾಗಿ ಹುಟ್ಟಿಕೊಂಡ ಅನುಭವ ಮಂಟಪವು ಮೊದಲ ವಿಶ್ವದ ಪ್ರಜಾಸತ್ತೆಯ ಧ್ವನಿ ಮತ್ತು ಧ್ವನಿಯಾಗಿತ್ತು, ಜಾಗತಿಕ ಮನುಕುಲ ಚರಿತ್ರೆಯ ಇತಿಹಾಸದ ಮೊದಲ ಪ್ರಜಾಪ್ರಭುತ್ವದ ಅಧ್ಯಾತ್ಮಿಕ,ಸಾಮಾಜಿಕ, ಶೈಕ್ಷಣಿಕ ಸಂಸತ್ತು ಇದಾಗಿತ್ತು, ಪ್ರತಿಯೊಬ್ಬ ಅನುಭವ ಮಂಟಪದ ಶಿವಶರಣರು, ಇಂದಿನ ಮಾನವ ಹಕ್ಕುಗಳ ಸಂಸ್ಥೆಯ ಸದಸ್ಯರಂತೆ ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದರು ಎನ್ನುವುದು ಸುಳ್ಳಲ್ಲ,ಹಾಗಾಗಿ ಅಂದು ಉತ್ತಮ ಮನುಷ್ಯರ ಅತ್ಯುತ್ತಮ ಮಾದರಿ ಸಮಾಜ ಕಟ್ಟುವ ಮಾಹಾಶಿವಶರಣ ಕೇಂದ್ರ ಅನುಭವ ಮಂಟಪದಾಗಿತ್ತು. ಬಸವಾದಿ ಶರಣರು ಸ್ಥಾವರಕ್ಕಿಂತ ಶಿವಶರಣರಿಗೆ ಹೆಚ್ಚು ಮಹತ್ವ ನೀಡಿದರ ಫಲವಾಗಿ ವಿಶ್ವಮಾನ್ಯ ಅನುಭವ ಮಂಟಪದಂತಹ ಸಂಸ್ಥೆಯ ಕಟ್ಟಿದ ಕಟ್ಟಡದ ಸ್ಥಳಗಳ ಕುರುಹುಗಳೆ ಇಲ್ಲದಿದ್ದಾಗ ಅದಕ್ಕೆ ಮರುಚಾಲನೆ ದೊರೆತದ್ದು ಶ್ರೀ ಚನ್ನಬಸವ ಪಟ್ಟದ್ದೇವರ ಸಾರಥ್ಯದಲ್ಲಿ ಜರುಗಿದ ಪ್ರಯತ್ನದ ಫಲದಿಂದ ಬಸವ ಕಲ್ಯಾಣದಲ್ಲಿ ಮತ್ತೂಮ್ಮೆ ನೂತನ ಅನುಭವ ಮಂಟಪದ ಕನಸು ಸಾಕಾರಗೊಳಿಸಿದರು. ಹಾಗಾಗಿ 770 ಅಮರ ಗಣಂಗಳು,ಒಂದು ಲಕ್ಷದ ಮೊಂಬತ್ತಾರು ಸಾವಿರ ಶರಣರು ಸೇರಿ ಜಾತಿ,ವರ್ಗ,ವರ್ಣ ರಹಿತ ಕಲ್ಯಾಣ ರಾಜ್ಯ ನಿರ್ಮಾಣವಾಗಬೇಕೆಂಬ ಅಭಿಲಾಷೆಯಿಂದ ಕಟ್ಟಲಾದ ನೂತನ ಅನುಭವ ಮಂಟಪಕ್ಕೆ ಸ್ವತ: ತಾವೇ ಮುಂದೆ ನಿಂತು ಕಲ್ಲು, ಮಣ್ಣು ಹೋತ್ತು ಅನುಭವ ಮಂಟಪ ಕಟ್ಟಿಸಿರುವುದು ನಮ್ಮಲ್ಲರ ಸೌಭಾಗ್ಯ ಎಂದೇ ಹೇಳಬಹುದು.ಹೀಗಾಗಿ ಈ ತ್ಯಾಗದ ರೂವಾರಿಗೆ ಇಂದಿನ ಸಮಾಜದ ಪ್ರತಿಯೊಬ್ಬ ಬಸವಾಭಿಮಾನಿಗಳು ಕೃತಜ್ಞತರಾಗಲೇಬೇಕು.
ಸಂದ ಗೌರವ ಪ್ರಶಸ್ತಿಗಳು:
ಬಸವ ಸಮಿತಿ ಹಲವಾರು ಸಂಘ ಸಂಸ್ಥೆಗಳು ಒಳಗೊಂಡಂತೆ ಹತ್ತಾರು ಪ್ರಶಸ್ತಿಗಳ ಹಾಗೂ ವಿವಿಧ ಸಂಘ ಸಂಸ್ತೆಗಳೀಂದ ಗೌರವ ಸನ್ಮಾನಗಳು ಸಂದಿವೆ.
1987ರಲ್ಲಿ ರಾಜ್ಯೋತ್ಸವ ಸನ್ಮಾನ. 1990 ರಂದು ದೇಹಲಿಯ ಕರ್ನಾಟಕ ಭವನದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಗ್ಯಾನೀ ಜೇಲಸಿಂಗ್ ಅವರಿಂದ ಸಾಮಾಜಿಕ ಸುಧಾರಣೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 1993ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲವು ಇವರ ಸಮಗ್ರ ಬದುಕಿನ ಹೋರಾಟ ಸಂದೇಶವನ್ನು ಗಮನಿಸಿ ಗೌರವ ಡಾಕ್ಟರೇಟ ಪದವಿ ನೀಡಿ ಗೌರವಿಸಿತ್ತು. ಜೊತೆಗೆ ಅವರು ಕನ್ನಡ ಪಟ್ಟದ್ದೇವರೆಂದು ಪ್ರಖ್ಯಾತಿಹೊಂದಿದ್ದರಿಂದ ಮಠದ ಕನ್ನಡ ಪರ ಚಟುವಟಿಕೆಗಳನ್ನು ಗಮನಿಸಿ 2006ರಂದು “ಸುವರ್ಣ ಕರ್ನಾಟಕ ವರ್ಷಾಚಾರಣೆ” ನಿಮಿತ್ಯ ಭಾಲ್ಕಿ ಹಿರೇಮಠ ಸಂಸ್ಥಾನಕ್ಕೆ “ಕರ್ನಾಟಕ ಏಕೀಕರಣ ಪುರಸ್ಕಾರ ನೀಡಿ ಅಭಿನಂದಿಸಿದೆ.
ನಮ್ಮಗೆಲ್ಲರಿಗೂ ದಾರಿದೀಪ:
ಪ್ರಪಂಚದ ಎಲ್ಲಾ ಜೀವಾತ್ಮರ ಘನತೆ, ಗೌರವ ಕಾಪಾಡುವುದರೊಂದಿಗೆ ಗೌರವಿಸುವುದೇ ನಿಜವಾದ ಮಾನವೀಯ – ಮನುಷ್ಯನ ಧರ್ಮ (ಗುಣ) ಹಾಗೆ ಸ್ವಾತಂತ್ರ್ಯ, ಸಮಾನತೆ, ನ್ಯಾಯ, ನೀತಿ, ಮೌಲ್ಯಗಳನ್ನು ಬಲವಾಗಿ ನಂಬಿ ಮಾನವೀಯ ಮೌಲ್ಯಗಳ ಸಾರಿದ ಮತ್ತು ಪ್ರೀತಿಯನ್ನು ಹಂಚಿದ ಜಗತ್ತಿನ ಮೇಧಾವಿ ಶ್ರೇಷ್ಠ ಮನುಕುಲದ ಸಂತರ ಸಂತ ಪಟ್ಟದ್ದೇವರು. ಪಟ್ಟದ್ದೇವರ ಜೀವನದ ಆದರ್ಶಗಳು ನಮ್ಮ ಬದುಕಿನ ಭಾಗವಾಗಬೇಕು. ಎಕೆಂದರೆ ಅವರು ಶರಣ ತತ್ವಗಳನ್ನು ಭೋಧಿಸಲಿಲ್ಲ. ಬದುಕಿ ತೋರಿಸಿದರು. ಪ್ರಯೋಗ ಮಾಡಿನೋಡಲಿಲ್ಲ (ಶರಣ ತತ್ವ ಮತ್ತು ಸಮಾಜ ಮುಖಿ ವಿಚಾರಗಳನ್ನು ಮೊದಲು ಅವರ ಜೀವನದಲ್ಲಿ ಜಾರಿಗೆ ತಂರುವ ಮೂಲಕ ಇತರರಿಗೆ ಹೇಳುತ್ತಿದ್ದರು)ನುಡಿದಂತೆ ನಡೆದರು, ದೇಹದಲ್ಲಿ ಜೀವ ಇರುವವರೆಗೂ ಒಳ್ಳೆಯ ಕೆಲಸ ಮಾಡಬೇಕೆಂದು ಜನರಿಗೆ ತಿಳಿಹೇಳಿದರು.
ಹೀಗೆ ಅವರು 109 ವಸಂತ ಕಾಲ ಕಳೆದು ಸಾವಿನ ಕೊನೆಯವರೆಗೂ ಶರಣರ ಸಂದೇಶಗಳನ್ನು ನಾಡಿನ ತುಂಬೆಲ್ಲಾ ಪ್ರಚಾರ ಗೈಯುತ್ತಾ, ಕ್ರೀಯಾಶೀಲರಾಗಿ ಬಾಳಿದರು. ಹೆಚ್ಚು ಪ್ರಚಾರದ ಅಬ್ಬರವಿಲ್ಲದೇ ಹಲವಾರು ಜನಪರ ರಚನಾತ್ಮಕ ಕಾರ್ಯಗಳನ್ನು ಕೈಗೊಂಡು ಕಾರ್ಯರೂಪಕ್ಕೆ ತಂದರೂ “ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲವೆಂಬತೆ” ಬದುಕಿದ ಶ್ರೀಗಳು ಜೀವನದುದ್ದಕ್ಕೂ “ಮುಗಿದು ಕೈಬಾಗಿದ ತಲೆ” ಅವರದ್ದು. ಇಡೀ ಬದುಕಿನ ಒಂದೊಂದು ಹೆಜ್ಜೆಕೂಡ ಇಂದಿನ ಸಮಾಜಕ್ಕೆ ಆದರ್ಶ ಹಾಗೂ ಅನುಕರಣೀಯವಾಗಿದೆ ಶರಣ ಬಂಧುಗಳೆ. ಅವರ ಬದುಕ್ಕನ್ನೇ ಅವರು ಪ್ರಯೋಗಕ್ಕೆ ಒಳಪಡಿಸಿಕೊಂಡರು ಎಂಬುದು ನಿಜ, ಅಂತೆಯೇ ಎಲ್ಲವರ್ಗದ ಜನರ ಆದರ, ಗೌರವಕ್ಕೆ ಪಾತ್ರರಾದರು. ಹಾಗಾಗಿ ಮೂರು ಶತಮಾನ ಕಂಡ ಅಪರೂಪದ ಮನುಕುಲದ ಮೌಲ್ಯಾಧಾರಿತ ಮೇರು ಪುರುಷ, ಶ್ರೇಷ್ಠ ಸಂತ ಮಾಹಾಶಿವಶರಣ,ಕರುನಾಡಿನ ಜಂಗಮೂರ್ತಿ
ಶ್ರೀ ಚನ್ನಬಸವ ಪಟ್ಟದ್ದೆವರು.
ದಿನಾಂಕ 22-04-1999 ರಂದು ಬಸವ ಸ್ಮರಣೆಯೊಂದಿಗೆ ಮಾಹಾ ಬಯಲಿನಲ್ಲಿ ಬಯಲಾದರು.
ಹೀಗಾಗಿ ಬಸವಣ್ಣನವರ ವಿಚಾರಗಳನ್ನು ಭಾಷಣಗಳಿಗೆ ಸೀಮಿತಗೊಳಿಸದೆ ವಿಶ್ವದಾದ್ಯಂತ ಪರಿಚಯಿಸುವ ಕೆಲಸವಾಗಬೇಕು, ಹಾಗೆ ಚನ್ನಬಸವ ಪಟ್ಟದೇವರು ಬದುಕಿನುದ್ದಕ್ಕೂ ಬಸವಣ್ಣನವರ ತತ್ವಗಳನ್ನು ಆಚರಣೆಗೆ ತಂದವರು. ಅಂತಹ ಶಿವಶರಣರ ಆದರ್ಶ ವಿಚಾರ – ಆಚಾರಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಬೇಕೆಂಬುವುದೆ ಈ ಲೇಖನದ ಆಶಯ.
ಸರಳತೆಯಿಂದ ಆಚರಣೆ ಮಾಡೋಣ :
ದಿನಾಂಕ: 22 ಏಪ್ರಿಲ್ 2020 ರಂದು ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಭಕ್ತಿಯಿಂದ ಆಚರಿಸೋಣ.
ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಬಸವಾದಿ ಶರಣರ ವಚನ ಪಠಣ ಮಾಡುವ ಮೂಲಕ ಜನಮಾನಸದ ಬದುಕಿಗೆ ಬೆಳಕಾದ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವವನ್ನು ನಮ್ಮ ನಮ್ಮ ಮನೆಗಳಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಸರಳ ರೀತಿಯಲ್ಲಿ ಆಚರಣೆ ಮಾಡಲು ಮುಂದಾಗೋಣ.
ಶರಣ: ಸಂಗಮೇಶ ಎನ್ ಜವಾದಿ,
ಕೊಡಂಬಲ. ಬೀದರ ಜಿಲ್ಲೆ.